ಗದಗ: ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಬಿಇಓಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಗದಗ ಜಿಲ್ಲೆ ರೋಣದಲ್ಲಿ ನಡೆದಿದೆ.
ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ನಂಜುಂಡಯ್ಯ ಅವರಿಗೆ ಶಿಕ್ಷಕಿ ಎಸ್.ಎಮ್. ನಡುವಿನಮನಿ ಅನ್ನುವರ ಪತಿ ಉಮೇಶ್ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ. ರೋಣ ತಾಲೂಕಿನ ಚಿಕ್ಕಮಣ್ಣೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಎಸ್.ಎಮ್ ನಡುವಿನಮನಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಶಾಲೆಗೆ ಕಳೆದ ಸೆಪ್ಟೆಂಬರ್ 17, 2016 ರಂದು ವರ್ಗಾವಣೆ ಮಾಡಲಾಗಿತ್ತು.
ವರ್ಗಾವಣೆಯಾಗಿ ವರ್ಷ ಕಳೆದರೂ ಶಿಕ್ಷಕಿ ಹೊಳೆಇಟಗಿ ಶಾಲೆಗೆ ಹಾಜರಾಗಿರಲಿಲ್ಲ. ನಂತರ ಅವರನ್ನ ಚಿಕ್ಕಮಣ್ಣೂರು ಶಾಲೆಯಿಂದ ಬಿಡುಗಡೆ ಮಾಡುವಂತೆ ಮುಖ್ಯೋಪಾಧ್ಯಾಯರಿಗೆ ಬಿಇಓ ಸೂಚಿಸಿದರು. ಇದಕ್ಕೆ ಶಿಕ್ಷಕಿ ಪತಿ ಉಮೇಶ್ ಸಿಟ್ಟಾಗಿ ಬಿಇಓ ಎನ್ ನಂಜುಂಡಯ್ಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕು ತೋರಿಸಿ ಜೀವ ಬೆದರಿಕೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಶಿಕ್ಷಕಿ ಪತಿ ಉಮೇಶ್ ವಿರುದ್ಧ ರೋಣ ಪೊಲೀಸ್ ಠಾಣೆಗೆ ಬಿಇಓ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ತೋರಿಸಿ ಜೀವ ಬೆದರಿಕೆ ಬಗ್ಗೆ ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.