ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ಯುವಕನೊಬ್ಬನ ಮೇಲೆ ತಲವಾರು ದಾಳಿ ನಡೆದಿದೆ. ಬೈಕಿನಲ್ಲಿ ಬಂದ ಇಬ್ಬರು ಯುವಕನ ಮೇಲೆ ತಲವಾರ್ ದಾಳಿ ನಡೆಸಿದ್ದಾರೆ.
ಕೇಶವ್ ಹಲ್ಲೆಗೊಳಗಾದ ಯುವಕ. ಕೆಲವು ತಿಂಗಳ ಹಿಂದೆ ನಡೆದಿದ್ದ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದಲ್ಲಿ ಕೇಶವ್ ಆರೋಪಿಯಾಗಿದ್ದ. ಮಂಗಳವಾರ ರಾತ್ರಿ ಸುಮಾರು 7.30ರ ವೇಳೆಗೆ ಕೇಶವ್ ತನ್ನ ಸ್ಕೂಟಿಯಲ್ಲಿ ಕಲ್ಲಡ್ಕದಿಂದ ಮನೆಯತ್ತ ತೆರಳುತ್ತಿದ್ದಾಗ ದುಷ್ಕರ್ಮಿಗಳು ತಲವಾರ್ ದಾಳಿ ನಡೆಸಿದ್ದಾರೆ. ಇದರಿಂದ ಕೇಶವ್ ತಲೆಗೆ ಮತ್ತು ಕೈಗೆ ಗಂಭೀರ ಗಾಯಗಳಾಗಿದ್ದು, ಕಲ್ಲಡ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿಟ್ಲದ ಕರೋಪಾಡಿಯಲ್ಲಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ
ಘಟನೆ ಬಳಿಕ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಕೆಲ ಕಿಡಿಗೇಡಿಗಳು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ಪರಿಣಾಮ ಖಾಸಗಿ ಬಸ್ಗಳ ಗಾಜು ಪುಡಿಪುಡಿಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಲ್ಲಡ್ಕ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು, ಬಂದ್ ವಾತಾವರಣ ನೆಲೆಸಿತ್ತು. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣದ ಹಿನ್ನೆಲೆಯಲ್ಲಿ ಕಲ್ಲಡ್ಕದಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಸದ್ಯ ಕಲ್ಲಡ್ಕ ಸಹಜ ಪರಿಸ್ಥಿತಿಯತ್ತ ಮರಳಿದೆ.
ಏಪ್ರಿಲ್ ತಿಂಗಳ 20ರಂದು ಪಂಚಾಯತ್ ಕಚೇರಿಯಲ್ಲೇ ಕಾಂಗ್ರೆಸ್ ಮುಖಂಡ ಜಲೀಲ್ ಕರೋಪಾಡಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. 11 ಆರೋಪಿಗಳ ಪೈಕಿ ಕೇಶವ ಕೂಡ ಒಬ್ಬನಾಗಿದ್ದು ಪ್ರತೀಕಾರ ರೂಪದಲ್ಲಿ ಈ ಕೊಲೆ ಯತ್ನ ನಡೆದಿದೆ ಎನ್ನಲಾಗುತ್ತಿದೆ.