ಹೈದರಾಬಾದ್: ವಿದ್ಯಾರ್ಥಿ, ವಿದ್ಯಾರ್ಥಿಯ ಗೆಳತಿ ಕೃಷ್ಣನದಿಯನ್ನು ದಾಟುವ ವೇಳೆ ಅಕಸ್ಮಾತಾಗಿ ಬಿದ್ದು, ಸಾವನ್ನಪ್ಪಿರುವ ಘಟನೆ ಗದ್ವಾಲ್ ಜೋಗುಲಂಬಾ ಜಿಲ್ಲೆಯ ರೆಕುಲಪಲ್ಲಿಯಲ್ಲಿ ಶನಿವಾರ ಸಂಜೆ ನಡೆದಿದೆ.
ವಾರಿಸ್ (17) ಮತ್ತು ಸಾನಾ ಜಬೀನ್ (17) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ವಾರಿಸ್ ಕುರ್ನೂಲ್ ಜಿಲ್ಲೆಯ ಎಮ್ಮಿಗನೂರ್ ನಿವಾಸಿಯಾಗಿದ್ದು, ಎರ್ರಾಕೋಟಾದಲ್ಲಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ವಾರಿಸ್ ತನ್ನ ಪೋಷಕರಾದ ಮೊಹಮ್ಮದ್ ರಫಿ ಮತ್ತು ಮುನಿರಾಬಾ ಅವರಿಗೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದಾನೆ. ನಂತರ ಗದ್ವಾಲ್ಗೆ ಹೋಗಿ ತನ್ನ ಚಿಕ್ಕಪ್ಪನ ಮಗಳಾದ ಸಾನಾ ಜಬೀನ್ ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ.
ಇಬ್ಬರು ದ್ವಿ ಚಕ್ರ ವಾಹದ ಮೇಲೆ ಜುರಾಲಾದ ಕೆಳಭಾಗದ ಪ್ರದೇಶಗಳಿಗೆ ಹೊರಟಿದ್ದಾರೆ. ಬಳಿಕ ಕೃಷ್ಣನದಿಯ ತೀರದಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಬಳಿಕ ಕತ್ತಲಾಗುತ್ತಿದ್ದಂತೆ ಇಬ್ಬರು ಮನೆಗೆ ಹಿಂದಿರುಗಲು ನದಿಯನ್ನು ದಾಟಲು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸ ಜಾಸ್ತಿ ಇದ್ದ ಕಾರಣ ದಾಟಲು ಸಾಧ್ಯವಾಗದೇ ನದಿಯಲ್ಲಿ ಬಿದ್ದಿದ್ದಾರೆ.
ಮಕ್ಕಳು ಇಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ ಎಂದು ಗಾಬರಿಗೊಂಡು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ನದಿಯ ಬಳಿ ಹೋಗಿ ಕಾರ್ಯಚರಣೆಯನ್ನು ನಡೆಸಿ ರೆಕುಲಪಲ್ಲಿಯಿಂದ ಸುಮಾರು ದೂರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.