ಯಾದಗಿರಿ: ಜಿಲ್ಲೆಯ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯಲು ಮುಂದಾಗಿದ್ದಾಳೆ.
8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಕೃತಿಕಾ ಪತ್ರ ಬರೆಯಲು ಮುಂದಾಗಿದ್ದು, ತನ್ನ ಮನೆ ಎದುರು ಇರುವ ಪಾರ್ಕ್ ಸ್ವಚ್ಛಗೊಳಿಸಿಲ್ಲ ಎಂದು ಪ್ರಧಾನಿ ಮೋದಿಗೆ ದೂರಲು ನಿರ್ಧರಿಸಿದ್ದಾಳೆ. ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಯೋಜನೆಗೆ ಮಹತ್ವ ಕೊಟ್ಟಿದ್ದಾರೆ. ಆದರೆ ಯಾದಗಿರಿಯಲ್ಲಿ ನಗರಸಭೆ ಅಧಿಕಾರಿಗಳು ಸ್ವಚ್ಛ ಭಾರತ ಯೋಜನೆ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಸ್ವಚ್ಛಗೊಳಿಸುವಂತೆ ಹಿಂದೆ ಪತ್ರ ಬರೆದಿದ್ದೆ. ಆದರೆ ಅವರು ನಿಗಾ ವಹಿಸಿಲ್ಲ. ಅವರು ನನ್ನ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ನಾನು ಉದ್ಯಾನವನ ರಕ್ಷಿಸಿಕೊಳ್ಳಲು ಪ್ರಧಾನಿ ಮೋದಿಗೆ ಪತ್ರ ಬರೆಯುವೆ ಎಂದು ಕೃತಿಕಾ ಹೇಳುತ್ತಿದ್ದಾಳೆ.
ಯಾದಗಿರಿಯ ವಾರ್ಡ್ ನಂ 31ರ ಚಿರಂಜೀವಿ ನಗರದ ನಮ್ಮ ಮನೆ ಎದುರು ಇರುವ ಉದ್ಯಾನವನವು ಯಾದಗಿರಿ ನಗರಸಭೆ ವ್ಯಾಪ್ತಿಗೆ ಬರುತ್ತದೆ. ನಗರಸಭೆಯು ಲಕ್ಷಾಂತರ ರೂ ವೆಚ್ಚ ಮಾಡಿ ಉದ್ಯಾನವನ ನಿರ್ಮಿಸಿದೆ. ಆದರೆ ಸ್ವಚ್ಛತೆ ಕಡೆ ಗಮನ ಹರಿಸಿದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದಿದ್ದಾಳೆ.
ಅಕ್ಟೋಬರ್ ತಿಂಗಳಲ್ಲಿ ಯಾದಗಿರಿ ನಗರಸಭೆ ಪೌರಾಯುಕ್ತ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದು ಕೊರಿಯರ್ ಮೂಲಕ ಕಳುಹಿಸಿದ್ದೇನೆ. ಆದರೆ ಈ ವರಗೂ ಯಾವುದೇ ಅಧಿಕಾರಿಗಳಿಂದ ಉತ್ತರ ಸಿಕ್ಕಿಲ್ಲ. ಪತ್ರ ಮುಟ್ಟಿದ ಮೇಲೆ ಅಧಿಕಾರಿಗಳು ಭೇಟಿ ನೀಡಿ ಉದ್ಯಾನವನ ಸ್ವಚ್ಛಗೊಳಿಸಿ ಸಮಸ್ಯೆಗೆ ಮುಕ್ತಿ ಕಾಣುವ ಕೆಲಸ ಮಾಡಿಲ್ಲ. ಇದರಿಂದ ಮತ್ತೆ ನಾನು ಗುರುವಾರ ಜ್ಞಾಪನ ಪತ್ರವನ್ನು ಅಧಿಕಾರಿಗಳಿಗೆ ಕೋರಿಯರ್ ಮೂಲಕ ಕಳುಹಿಸಿದ್ದೇನೆ ಎಂದು ಕೃತಿಕಾ ಹೇಳಿದ್ದಾಳೆ.