ಬೀದರ್: ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕಮಠಾಣದಲ್ಲಿರುವ ಮೊರಾರ್ಜಿ ಕಾಲೇಜಿನ ಸಮೀಪದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶಿವಕುಮಾರ ಶ್ರೀಮಂತ (17) ಮೃತಪಟ್ಟಿರುವ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನದ ಊಟ ಮಾಡಿ ಕಾಲೇಜಿನ ಹಿಂಬದಿಯಿರುವ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಆದರೆ ಈಜಲು ಬಾರದೇ ಹೊಂಡದಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ.
ಶಿವಕುಮಾರ್ ಮಧ್ಯಾಹ್ನ ತನ್ನ ಮೂವರು ಸ್ನೇಹಿತರೊಂದಿಗೆ ಹೊಂಡದಲ್ಲಿ ಈಜಾಡಲು ಹೋಗಿದ್ದಾನೆ. ಶಿವಕುಮಾರ್ ಈಜುಬಾರದೆ ನೀರಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಭಯದಿಂದ ಓಡಿ ಹೋಗಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ವಿಷಯ ತಿಳಿಸುವಲ್ಲಿ ಅವರು ವಿಳಂಬ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿ ಹೊಂಡದಲ್ಲಿ ಕಾಣೆಯಾಗಿದ್ದರೂ ಮೂರು ಗಂಟೆ ತಡವಾಗಿ ಸ್ಥಳಕ್ಕೆ ಪ್ರಾಚಾರ್ಯ ರವೀಂದ್ರ ಬಂದಿದ್ದಾರೆ. ಇದರಿಂದ ಕಾಲೇಜು ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಶಿವಕುಮಾರ್ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಶವಕ್ಕಾಗಿ ರಾತ್ರಿ ಎಲ್ಲಾ ಹುಡುಕಾಟ ಮಾಡಿದ್ದಾರೆ. ಆದರೆ ಏನು ಪ್ರಯೋಜನವಾಗಿಲ್ಲ. ಕೊನೆಗೆ ಸತತ ಹುಟುಕಾಟದಿಂದ ಇಂದು ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಈ ಘಟನೆ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.