ಮೈಸೂರು: ನಿಗೂಢ ಶಬ್ದಕ್ಕೆ ಮನೆಯ ಕಿಟಕಿ ಗಾಜುಗಳು ಛಿದ್ರ ಛಿದ್ರಗೊಂಡಿರುವ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ.
ಕುಂಬಾರಕೊಪ್ಪಲಿನ ನಿವಾಸಿ ಮಂಜುನಾಥ್ ಎಂಬವರ ಮನೆಯಲ್ಲಾದ ಶಬ್ದದಿಂದಾಗಿ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಜಖಂ ಆಗಿದ್ದು, ಕಿಟಕಿ ಛಿದ್ರ ಛಿದ್ರವಾಗಿದೆ. ಕಟ್ಟಡ ಬಿರುಕು ಬಿಟ್ಟಿದ್ದು, ಅಕ್ಕಪಕ್ಕದ ಮನೆಗಳಿಗೂ ಹಾನಿ ಉಂಟಾಗಿದೆ. ಶಬ್ದದ ತೀವ್ರತೆ ಸುಮಾರು ಎರಡು ಕಿ.ಮೀ ವರೆಗೂ ಕೇಳಿಸಿದೆ. ಶಬ್ದ ಕೇಳಿಬಂದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಭೀಕರ ಶಬ್ದಕ್ಕೆ ಕಾರಣ ಇನ್ನೂ ನಿಗೂಢವಾಗಿದೆ. ಮನೆಯಿಂದ ನಿಗೂಢ ಶಬ್ದ ಕೇಳಿಬಂದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.