ಹೈದರಾಬಾದ್: ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರೋ ಘಟನೆ ತೆಲಂಗಾಣದ ಲಲ್ಲಾಗುಡದಲ್ಲಿ ಗುರುವಾರದಂದು ನಡೆದಿದೆ.
ಸಂತ್ರಸ್ತ ಯುವತಿಯನ್ನು ಸಂಧ್ಯಾ ರಾಣಿ ಎಂದು ಗುರುತಿಸಲಾಗಿದೆ. ಇವರು ಇಲ್ಲಿನ ಶಾಂತಿನಗರದಲ್ಲಿ ಅಲುಮಿನಿಯಮ್ ಡೋರ್ಸ್ ಉತ್ಪಾದಕ ಸಂಸ್ಥೆಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆಯಿಂದಾಗಿ ಸಂಧ್ಯಾ ರಾಣಿ ಅವರ ದೇಹದ ಶೇ. 70ರಷ್ಟು ಭಾಗ ಸುಟ್ಟುಹೋಗಿದೆ. ಸದ್ಯ ಅವರಿಗೆ ಇಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಆರೋಪಿ ಕಾರ್ತಿಕ್ ಸುಮಾರು ಒಂದು ವರ್ಷದಿಂದ ಸಂಧ್ಯಾಗೆ ಪರಿಚಯವಿದ್ದು, ಆಕೆಯನ್ನ ಪ್ರೀತಿಸುತ್ತಿದ್ದ. ಆದ್ರೆ ಸಂಧ್ಯಾ ಆತನ ಪ್ರೀತಿಯನ್ನ ನಿರಾಕರಿಸುತ್ತಾ ಬಂದಿದ್ದಳು. ಇದು ನಮ್ಮ ಕುಟುಂಬಕ್ಕೆ ವಿರುದ್ಧ. ನಾವಿಬ್ಬರೂ ಸ್ನೇಹಿತರಾಗಿ ಇರೋಣ ಎಂದಿದ್ದಳು ಅಂತ ಲಲ್ಲಾಗುಡ ಪೊಲೀಸರು ಹೇಳಿದ್ದಾರೆ.
ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ತಿಕ್ ಸಂಧ್ಯಾಳನ್ನು ಕೊಲ್ಲಲು ನಿರ್ಧರಿಸಿದ್ದ. ಗುರುವಾರ ಸಂಜೆ ಸಂಧ್ಯಾ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಕಾರ್ತಿಕ್, ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಕೆಲವೇ ನಿಮಿಷಗಳಲ್ಲಿ ಈ ಘಟನೆ ನಡೆದುಹೋಯ್ತು. ನೋಡನೋಡ್ತಿದ್ದಂತೆ ಯುವತಿಯನ್ನ ಬೆಂಕಿ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಬೆಂಕಿಯನ್ನ ನಂದಿಸಿ ಯುವತಿಯನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸದ್ಯ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಮಗಳು ಬರುತ್ತಾಳೆಂದು ಮನೆಯಲ್ಲಿ ಕಾಯುತ್ತಿದ್ದ ಸಂಧ್ಯಾ ಅವರ ತಾಯಿ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅವಳು ನನ್ನ ಕಿರಿಯ ಮಗಳು. ಕಷ್ಟಪಟ್ಟು ಕೆಲಸ ಮಡುತ್ತಿದ್ದಳು, ಕಾರ್ತಿಕ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಸಂಧ್ಯಾ ತಾಯಿ ಹೇಳಿದ್ದಾರೆ.
ಲಲ್ಲಾಗುಡ ಪೊಲೀಸರು ಕಾರ್ತಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಆತನನ್ನು ವಶಕ್ಕೆ ಪಡೆದಿದ್ದಾರೆ.