ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಆಗಿರುವ ಸೋಲಿಗೆ ಸಿಎಂ ವಿರುದ್ಧ ಪ್ರತೀಕಾರವನ್ನು ತೀರಿಸಿಕೊಳ್ಳಲು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಚಾಮುಂಡೇಶ್ವರಿಯಲ್ಲಿ ಎಲ್ಡಿಎನ್ ಮತ್ತು ವರುಣಾ ಕ್ಷೇತ್ರದಲ್ಲಿ ಜಿಎಲ್ಡಿಎನ್ ತಂತ್ರವನ್ನು ಹೆಣೆದಿದ್ದಾರೆ.
ಬಿಜೆಪಿಯ ಗೆಲುವಿಗೆ ವರುಣಾದಲ್ಲಿ ಲಿಂಗಾಯತ, ದಲಿತ, ನಾಯಕ(ಎಲ್ಡಿಎನ್) ಮತಗಳನ್ನು ಕ್ರೋಢೀಕರಿಸುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯತ, ದಲಿತ, ನಾಯಕ(ಜಿಎಲ್ಡಿಎನ್) ಮತಗಳನ್ನು ಕ್ರೋಢೀಕರಿಸಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದೇ ವಿಚಾರವಾಗಿ ಲಿಂಗಾಯತ ಮತ್ತು ವೀರಶೈವರ ಮತಗಳನ್ನು ಸೆಳೆಯಲು ಸುತ್ತೂರು ಮಠದ ಸ್ವಾಮಿಗಳ ಜೊತೆ ಶ್ರೀನಿವಾಸ್ ಪ್ರಸಾದ್ ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆಯನ್ನು ನಡೆಸಿದ್ದಾರೆ.
ವರುಣಾ ಕ್ಷೇತ್ರದಲ್ಲಿ 60,000 ಲಿಂಗಾಯತರು, 42,000 ಪರಿಶಿಷ್ಠ ಜಾತಿ, 24,000 ಪರಿಶಿಷ್ಠ ಪಂಗಡ, 33,000 ಕುರುಬರು ಹಾಗೂ 13,000 ಒಕ್ಕಲಿಗ ಮತಗಳಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚು ಒಕ್ಕಲಿಗರ ಮತಗಳಿದ್ದು ನಂತರದ ಸ್ಥಾನದಲ್ಲಿ ಕುರುಬ, ನಾಯಕ, ಲಿಂಗಾಯತ ಮತ್ತು ದಲಿತ ಮತಗಳಿವೆ.
2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳ ಅಂತರದಿಂದ ಸೋಲಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನ ಜಿಟಿ ದೇವೇಗೌಡ ಅವರು ಕಾಂಗ್ರೆಸ್ನ ಎಂ ಸತ್ಯನಾರಾಯಣ ಅವರನ್ನು 7,103 ಮತಗಳಿಂದ ಸೋಲಿಸಿದ್ದರು.