ತಿರುವನಂತಪುರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ನೈಋತ್ಯ ಮಾರುತವು ಕೇರಳ ಹಾಗೂ ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿದ್ದು ಈ ಬಾರಿಯ ಮುಂಗಾರು ಮಳೆ ಅಧಿಕೃತವಾಗಿ ಶುರುವಾಗಿದೆ.
ಬಿರು ಬಿಸಿಲಿನಿಂದ ತತ್ತರಿಸುತ್ತಿದ್ದ ಕೇರಳದ ಜನತೆಗೆ ಮಂಗಳವಾರ ಮುಂಜಾನೆಯಿಂದ ಆರಂಭವಾದ ಮಳೆ ರಿಲೀಫ್ ನೀಡಿದೆ. ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಿದೆ ಎಂದು ಕೇರಳ ಹವಾಮಾನ ಇಲಾಖೆ ಹೇಳಿದೆ.
ಮುಂಗಾರು ಮಾರುತ ಪ್ರವೇಶ ಮಾಡಿದ್ದರಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಕಣ್ಣೂರು, ಮಲಪ್ಪುರಂ, ಕೋಯಿಕ್ಕೋಡ್ನಲ್ಲಿ ಮುಂಜಾನೆ ಬಿರುಸಿನ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದ ವೈಕಂ ಹಾಗೂ ಮಾವೇಲಿಕ್ಕರ ಎಂಬಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ 4 ದಿನಗಳ ಕಾಲ ಕೇರಳದಾದ್ಯಂತ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳ ಹಾಗೂ ಲಕ್ಷದ್ವೀಪದಲ್ಲಿ ಜೋರಾಗಿ ಸುರಿಯುತ್ತಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.