ಮುಂಬೈ: ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮತ್ತು ಮಹಾರಾಷ್ಟ್ರದ ಇಬ್ಬರು ಬಿಜೆಪಿ ಶಾಸಕರ ಕೊಲೆಗೆ ಸಂಚು ನಡೆಯುತ್ತಿರುವ ಕುರಿತು ಗುಪ್ತಚರ ಇಲಾಖೆ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ.
ಗಾಯಕ ಸೋನು ನಿಗಮ್ ಮತ್ತು ಮಹಾರಾಷ್ಟ್ರದ ಇಬ್ಬರು ಬಿಜೆಪಿ ಶಾಸಕರಾದ ರಾಮ್ ಕದಂ ಮತ್ತು ಆಶಿಶ್ ಶೆಲಾರ್ಗೆ ಅವರ ಕೊಲೆ ಗೆ ಸಂಚು ರೂಪಿಸಲಾಗಿದ್ದು, ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಇವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳ ಅಥವಾ ಸಿನಿಮಾ ಪ್ರಚಾರದ ವೇಳೆಯಲ್ಲಿ ಗಾಯಕ ಸೋನು ನಿಗಮ್ ಮೇಲೆ ದಾಳಿ ನಡೆಸಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಕಳೆದ ವರ್ಷ ಸೋನು ನಿಗಮ್ ಆಜಾನ್ ವಿಚಾರವಾಗಿ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ತಮ್ಮ ಮನೆಯ ಸಮೀಪ ಧ್ವನಿವರ್ಧಕಗಳಿಂದ ಮುಂಜಾನೆಯೇ ಬರುವ ಆಜಾನ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಸೋನು ನಿಗಂ, ದೇವರು ಎಲ್ಲರಿಗೂ ಆಶೀರ್ವಾದ ನೀಡುತ್ತಾನೆ. ಆದರೆ ನಾನು ಮುಸ್ಲಿಂ ಅಲ್ಲ ಆದರೂ ನಾನು ಮುಂಜಾನೆ ಆಜಾನ್ ಧ್ವನಿ ಕೇಳಿ ಎಚ್ಚರಗೊಳ್ಳುತ್ತೇನೆ. ಇಂತಹ ಬಲವಂತದ ಧಾರ್ಮಿಕತೆ ಭಾರತದಲ್ಲಿ ಎಂದು ಅಂತ್ಯವಾಗುತ್ತದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಸೋನು ನಿಗಮ್ ಅವರ ಈ ಟ್ವೀಟ್ ಗೆ ಮುಸ್ಲಿಂ ಧಾರ್ಮಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಪ್ರಸ್ತುತ ಪಾಕ್ ಮೂಲದ ಉಗ್ರ ಸಂಘಟನೆಗಳು ಸೋನು ನಿಗಮ್ ಹತ್ಯೆಗೆ ಸಂಚು ಹೂಡಿವೆ. ಹೀಗಾಗಿ ಸೋನು ನಿಗಂ ಮತ್ತು ಇಬ್ಬರು ಬಿಜೆಪಿ ಎಂಎಲ್ಎಗಳಾದ ರಾಮ್ ಕದಂ ಮತ್ತು ಆಶಿಶ್ ಶೆಲಾರ್ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.