ಚಿಕ್ಕಮಗಳೂರು: ಮನೆಯ ಅಂಗಳದ ಗಿಡ-ಗಂಟೆಯ ಒಳಗೆ ಅವಿತು ಕುಳಿತಿದ್ದ 12 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಚಿಕ್ಕಮಗಳೂರಿನ ಸ್ನೇಕ್ ನರೇಶ್ ಮಧ್ಯರಾತ್ರಿ 12 ಗಂಟೆಗೆ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ನ ಪ್ರಭಾಕರ್ ಗೌಡ ಎಂಬವರ ಮನೆಯಲ್ಲಿ ಈ ಬೃಹತ್ ಕಾಳಿಂಗವನ್ನ ಸೆರೆ ಹಿಡಿದಿದ್ದಾರೆ. ರಾತ್ರಿ 8.30ರ ವೇಳೆಗೆ ಬಂದ ಕಾಳಿಂಗನನ್ನ ನೋಡಿ ನಾಯಿಗಳು ಬೊಗಳಿದ ಕೂಡಲೇ ಮನೆಯವರು ಹೊರಬಂದಿದ್ದಾರೆ. ಕಾಳಿಂಗ ಪೊದೆಯೊಳಗೆ ಹೋಗೋದನ್ನ ಮನೆಯವರು ನೋಡಿ, ಸ್ನೇಕ್ ನರೇಶ್ ಗೆ ವಿಷಯ ಮುಟ್ಟಿಸಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ಹೋದ ನರೇಶ್ 2 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ 12 ಗಂಟೆ ಸುಮಾರಿಗೆ ಸರ್ಪವನ್ನ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ನೋಡೋದಕ್ಕೆ ಭಯವಾಗುವ ಬೃಹತ್ ಗಾತ್ರದ ಕಾಳಿಂಗ ಸರ್ಪ ಇದಾಗಿತ್ತು.