– ಪದ್ಮಾವತಿ ವಿರುದ್ಧ ಸಹಿ ಸಂಗ್ರಹ ಅಭಿಯಾನ
ಬೆಂಗಳೂರು: 50 ವರ್ಷ ಇತಿಹಾಸವಿರೋ ಬೆಂಗಳೂರಿನ ರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆಯ ಹೆಸರನ್ನ ನಾಮಕರಣ ಮಾಡಲು ಮುಂದಾಗಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯರು ಮೇಯರ್ ವಿರುದ್ಧ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ಮೇಯರ್ ಪದ್ಮಾವತಿ ಅವರು ರಾಜಾಜಿನಗರದ ರಾಮಮಂದಿರ ವಾರ್ಡ್ನ ರಸ್ತೆಗೆ ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಸುಮಾರು 40 ರಿಂದ 50 ವರ್ಷ ಇತಿಹಾಸವಿರೋ ರಾಮಮಂದಿರ ವಾರ್ಡ್ನ 10ನೇ ಮುಖ್ಯರಸ್ತೆಗೆ ಹೊಸ ಹೆಸರು ನಾಮಕರಣ ಮಾಡಲು ಸಿದ್ಧತೆಯಲ್ಲಿದ್ದಾರೆ.
ಈಗಾಗ್ಲೇ ರಾಮಮಂದಿರ ರಸ್ತೆ ಅಂತ ಫೇಮಸ್ ಆಗಿರೋ ಈ 10ನೇ ಮುಖ್ಯರಸ್ತೆಗೆ ಮೇಯರ್ ಪದ್ಮಾವತಿ ತಮ್ಮ ತಂದೆ ಗೋಪಾಲ್ ಅವ್ರ ಹೆಸರಿಡಲು ಮುಂದಾಗಿದ್ದಾರೆ. ಈ ನಾಮಕರಣ ಪ್ರಕ್ರಿಯೆಗೆ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಪದ್ಮಾವತಿ ಅವರ ನಡೆ ವಿರೋಧಿಸಿ `ಬೃಹತ್ ಬೆಂಗಳೂರು ನಗರ ನಾಗರೀಕರ ಹಕ್ಕು ಹೋರಾಟ ವೇದಿಕೆ’ ಸಹಿ ಸಂಗ್ರಹ ಮಾಡಿದೆ. ಗೋಪಾಲ್ ರಸ್ತೆ ಅಂತ ಹೆಸರಿಡೋ ಬದಲು ಶ್ರೀ ಕೈಲಾಸ ವೈಕುಂಠ ದೇವಸ್ಥಾನ ರಸ್ತೆ ಅಂತ ನಾಮಕರಣ ಮಾಡಲಿ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.
ಮೇಯರ್ ಪದ್ಮಾವತಿ ರಸ್ತೆ ನಾಮಕರಣಕ್ಕೆ ಮುಂದಾಗಿರೋದು ಇದೇ ಮೊದಲಲ್ಲ. ಚಾಮರಾಜಪೇಟೆಯ ಮೊದಲನೇ ಮುಖ್ಯರಸ್ತೆಗೆ ಕರ್ನಾಟಕ ಏಕಿಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರ ಹೆಸರನ್ನ ಇಡಲಾಗಿತ್ತು. ಈ ರಸ್ತೆಗೆ ಟಿಪ್ಪುಸುಲ್ತಾನ್ ರಸ್ತೆ ಅಂತ ಮರುನಾಮಕರಣಕ್ಕೆ ಮೇಯರ್ ಮುಂದಾಗಿದ್ದರು ಎಂದು ಹೇಳಲಾಗಿದೆ.
ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ರಸ್ತೆ ಮರುನಾಮಕರಣ ಕೈಬಿಟ್ಟ ಪದ್ಮಾವತಿ ಅವರು ಈಗ ಅವರ ತಂದೆ ಗೋಪಾಲ್ ಅವರ ಹೆಸರನ್ನ ರಾಮಮಂದಿರದ ಮುಖ್ಯರಸ್ತೆಗೆ ಇಡಲು ಮುಂದಾಗಿದ್ದಾರೆ.