ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಸಹಭಾಗಿತ್ವದ ಸಿದ್ದಾರ್ಥ ಶಿಕ್ಷಣ ಸಂಸ್ಥೆ, ಬಡ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದೆ.
ಮಧುಗಿರಿ ಪಟ್ಟಣದಲ್ಲಿರುವ ಸಿದ್ದಾರ್ಥ ಪ್ರೌಢ ಶಾಲೆಯವರು, ವೆಂಕಟಮ್ಮ ಎಂಬವರ ಸರ್ವೆ ನಂಬರ್ 122/5 ರಲ್ಲಿನ 17 ಕುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ. 1998 ರಲ್ಲಿ ಜಿ.ಪರಮೇಶ್ವರ್ ಮಧುಗಿರಿ ಶಾಸಕರಾಗಿದ್ದಾಗ ಈ ಅಕ್ರಮ ಖಾತೆ ಮಾಡಿಸಿದ್ದಾರೆ ಎನ್ನಲಾಗಿದೆ.
16 ವರ್ಷಗಳ ಬಳಿಕ ಅಕ್ರಮ ಖಾತೆ ವಿರುದ್ಧ ವೆಂಕಟಮ್ಮ ಪರ ಕೋರ್ಟ್ ತೀರ್ಪು ನೀಡಿದೆ. ಆದ್ರೂ ಅಧಿಕಾರಿಗಳು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಅಕ್ರಮ ಖಾತೆಯನ್ನು ರದ್ದುಗೊಳಿಸುತ್ತಿಲ್ಲ. ಈಗ ವೆಂಕಟಮ್ಮ ಕುಟುಂಬದ ಮೇಲೆ ಪರಮೇಶ್ವರ್ ಬೆಂಬಲಿಗರ ಕಣ್ಣು ಬಿದ್ದಿದೆ. ಇದರಿಂದ ಭಯಬಿದ್ದ ಕುಟುಂಬ ಮನೆ ಮಾರಿ, ಊರನ್ನೇ ಬಿಟ್ಟು ಮಾರಿ ದೇವನಳ್ಳಿಯ ಆಹುತಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿದ್ದಾರ್ಥ ಶೈಕ್ಷಣಿಕ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ವೆಂಕಟಮ್ಮರಿಂದ ಭೂಮಿ ಖರೀದಿಸಲಾಗಿದೆ. ಆದ್ರೆ ಈಗ ಅವರು ದಾಖಲೆಯಲ್ಲಿದ್ದ ಹೆಬ್ಬೆಟ್ಟಿನ ಗುರುತು ನಮ್ಮದಲ್ಲ ಎಂದು ವಾದ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.
ಕೆಳಹಂತದ ಎರಡು ಕೋರ್ಟ್ಗಳಲ್ಲಿ ವೆಂಕಟಮ್ಮರ ಪರ ಆದೇಶವಾದ್ರೂ ಸಿದ್ದಾರ್ಥ ಸಂಸ್ಥೆ ಆ ಜಮೀನು ಬಿಟ್ಟು ಕೊಡಲು ಸಿದ್ಧವಿಲ್ಲ. ಪದೇ ಪದೇ ಮೇಲ್ಮನವಿ ಸಲ್ಲಿಸಿ ಬಡ ವೆಂಕಟಮ್ಮ ಕುಟುಂಬದವರನ್ನು ಕೋರ್ಟ್ಗೆ ಎಳೆಯುತ್ತಿದೆ. ನ್ಯಾಯಾಲಯದಲ್ಲಿ ತಮಗೆ ಮುಖಭಂಗ ಆಗ್ತಿದ್ದಂತೆ ವೆಂಕಟಮ್ಮನವರ ಬಳಿ ಬಂದ ಆಡಳಿತ ಮಂಡಳಿ, ಜಮೀನಿಗೆ ದರ ನಿಗದಿ ಪಡಿಸಿ ಸೆಟಲ್ಮೆಂಟ್ ಮಾಡುವ ಭರವಸೆ ನೀಡಿತ್ತು. ಆದರೆ ಈಗ ಉಲ್ಟಾ ಹೊಡೆದಿದೆ ಅಂತ ಅವರು ಆರೋಪ ಮಾಡಿದ್ದಾರೆ.