ಬೆಂಗಳೂರು: ಈ ಬಾರಿ ಚಾಮುಂಡೇಶ್ವರಿ ಜೊತೆಗೆ ಬಾಗಲಕೋಟೆಯ ಬದಾಮಿಯಿಂದಲೂ ಸ್ಪರ್ಧಿಸಲು ಸಿಎಂ ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆರು ದಿನಗಳ ಕಾಲ ಸತತ ಪ್ರಚಾರ ನಡೆಸಿದ್ದಾರೆ. ವಿಪಕ್ಷ ನಾಯಕರ ಸವಾಲು ಕ್ಷೇತ್ರದಲ್ಲಿ ತುಸು ಹೆಚ್ಚೇ ಇದ್ದಹಾಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸೋಕೆ ತಯಾರಿ ನಡೆಸಿದ್ದಾರೆ. ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಬಯಲು ಮಾಡಿದ್ದಾರೆ. ನಮ್ಮಲ್ಲಿ ಸಿಎಂ ಹೊರತುಪಡಿಸಿ ಬೇರೆ ಯಾರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿಲ್ಲ ಎಂದು ಹೇಳುವ ಮೂಲಕ ವಿಚಾರ ಬಹಿರಂಗವಾಗಿದೆ.
ಒಂದು ವೇಳೆ ಸಿದ್ದರಾಮಯ್ಯ ಅವರು ಬದಾಮಿಯಿಂದ ಕಣಕ್ಕಿಳಿದರೆ ಹಾಲಿ ಶಾಸಕ ಬಿಬಿ ಚಿಮ್ಮನಕಟ್ಟಿ ಕಣದಿಂದ ಹಿಂದೆ ಸರಿಯಬೇಕಾಗುತ್ತದೆ. ಇನ್ನು ಸಿಎಂ ಕಣಕ್ಕಿಳಿದರೆ ಅವರ ಎದುರಾಳಿಯಾಗಿ ಪ್ರಬಲ ಅಭ್ಯರ್ಥಿಯನ್ನೇ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಆದರೆ ಅಭ್ಯರ್ಥಿ ಯಾರು ಅನ್ನುವುದು ಇನ್ನೂ ಫೈನಲ್ ಆಗಿಲ್ಲ. ಬದಾಮಿ ಇಂದ ಸಿಎಂ ಸ್ಪರ್ಧೆಗೆ ಜಾತಿ ಲೆಕ್ಕಾಚಾರ ಕಾರಣ ಎನ್ನಲಾಗಿದೆ.
ಮತದಾರರ ಸಂಖ್ಯೆ ಎಷ್ಟಿದೆ?
ಕ್ಷೇತ್ರದ ಒಟ್ಟು ಮತದಾರರು – 2,12,184
ಪುರುಷ ಮತದಾರರು – 1,07,074
ಮಹಿಳಾ ಮತದಾರರು – 1,05,110
ಬದಾಮಿ ಕ್ಷೇತ್ರದ ಜಾತಿವಾರು ಲೆಕ್ಕಾಚಾರ
ಕುರುಬ – 46 ಸಾವಿರ
ಗಾಣಿಗ – 26 ಸಾವಿರ
ಲಿಂಗಾಯತ – 32 ಸಾವಿರ (ಪಂಚಮಸಾಲಿ. ಬಣಜಿಗ)
ನೇಕಾರ – 17 ಸಾವಿರ
ಪ. ಜಾತಿ ಪಂಗಡ – 25 ಸಾವಿರ
ಅಲ್ಪ ಸಂಖ್ಯಾತರು – 12 ಸಾವಿರ
ಮರಾಠಾ ಕ್ಷತ್ರೀಯ – 9 ಸಾವಿರ
ವಾಲ್ಮೀಕಿ – 13 ಸಾವಿರ
ಬಂಜಾರ – 6 ಸಾವಿರ
ರೆಡ್ಡಿ – 10 ಸಾವಿರ
ಇತರರು – 16 ಸಾವಿರ
2013ರ ಫಲಿತಾಂಶ ಏನಿತ್ತು?
2013ರ ಚುನಾವಣೆಯಲ್ಲಿ ಬಿಬಿ ಚಿಮ್ಮನಕಟ್ಟಿ 15,113 ಮತಗಳ ಅಂತರದಿಂದ ಜಯಗಳಿಸಿದ್ದರು. ಚಿಮ್ಮನಕಟ್ಟಿ 57,446(41.3%) ಮತಗಳನ್ನು ಪಡೆದಿದ್ದರೆ ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಅವರು 42,333(30.4%) ಮತಗಳನ್ನು ಪಡೆದಿದ್ದರು. ಕಲ್ಲಪ್ಪ ಪಟ್ಟಣಶೆಟ್ಟಿ ಅವರು 30,310(21.8%) ಮತಗಳನ್ನು ಗಳಿಸಿದ್ದರು.