ಮೈಸೂರು: ಆಡಳಿತಾತ್ಮಕ ವಿಚಾರವನ್ನ ಬೀದಿಯಲ್ಲಿ ನಿಂತು ಮಾತನಾಡೋಲ್ಲ ಎಂದು ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ನಗರದ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರವು ಮಾಡಿಸುತ್ತೇವೆ. ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರಿಂದ ನಮಗೆ ಮುಜುಗರ ಆಗಿಲ್ಲ. ಇದರಲ್ಲಿ ಮುಜುಗರ ಆಗುವ ಪ್ರಶ್ನೆಯೂ ಇಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ
ಬಿಜೆಪಿ, ಜೆಡಿಎಸ್ ಮೋದಿ ಎಲ್ಲರಿಗೂ ನಾನೇ ಟಾರ್ಗೆಟ್ ಆಗಿದ್ದೇನೆ. ಚುನಾವಣೆ ವೇಳೆ ದೇವೇಗೌಡರು ಬಂದು ಅಳ್ತಾರೆ ಅವರ ಮಾತು ಕೇಳಬೇಡಿ. ಕುಮಾರಸ್ವಾಮಿ ಬಂದು ಏನೇನೋ ಹೇಳ್ತಾರೆ ಅವರ ಮಾತು ನಂಬಬೇಡಿ. ಯಡಿಯೂರಪ್ಪ, ಶೋಭ ಕರಂದ್ಲಾಜೆ, ಅಮಿತ್ ಶಾ ಇವರೆಲ್ಲರಿಗೂ ನಾನೆ ಟಾರ್ಗೆಟ್ ಆಗಿದ್ದೀನಿ. ಹೀಗಾಗಿ ನೀವು ನನ್ನ ಕೈ ಹಿಡಿಯಬೇಕು. ಚುನಾವಣೆಯಲ್ಲಿ ನನ್ನ ಜೊತೆ ಇರಬೇಕು ಎಂದು ತಿಳಿಸಿದ್ದಾರೆ.
ಮೋದಿಯಂತಹ ಸುಳ್ಳಗಾರ ಇನ್ನೊಬ್ಬರಿಲ್ಲ. 60 ವರ್ಷದಲ್ಲಿ ಇಂತಹ ಸುಳ್ಳು ಹೇಳುವ ಪ್ರಧಾನಿ ದೇಶಕ್ಕೆ ಸಿಕ್ಕಿರಲಿಲ್ಲ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಲೆವೆಲ್ಗೆ ಮೋದಿ ಇಳಿದಿದ್ದಾರೆ. ಮೋದಿ ಡೀಲ್ ಮಾಡಿಕೊಂಡಿದ್ದಾರೆ. ಹೀಗಾಗಿ ನೀರವ್ ಮೋದಿ, ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಮೋದಿ ಕುಮ್ಮಕ್ಕಿನಿಂದ ಇವರು ದೇಶ ಬಿಟ್ಟಿದ್ದಾರೆ ಎಂದಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಮಾತನಾಡಿದ ಅವರು, ಸಂಪುಟದಲ್ಲಿ ವಿಚಾರ ಚರ್ಚೆಗೆ ಬಂತು. ಸಮಯದ ಅಭಾವದಿಂದ ಚರ್ಚೆ ಮುಗಿದಿಲ್ಲ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಸಂಪುಟದಲ್ಲಿ ಇಲ್ಲ. ಎಲ್ಲರು ಚರ್ಚೆಗೆ ಮಾಡಿದ್ರು. ಆದರೆ ಇನ್ನಷ್ಟು ಚರ್ಚೆಗೆ ಸಮಯ ಇರಲಿಲ್ಲ. ಹಾಗಾಗಿ ಲಿಂಗಾಯತ ಧರ್ಮದ ವಿಚಾರವನ್ನ ಮುಂದೂಡಿದ್ದೇವೆ ಅಂದ್ರು.
ನಾಡಧ್ವಜವೇ ಬೇರೆ, ಕನ್ನಡ ಬಾವುಟವೇ ಬೇರೆ. ಕನ್ನಡ ಧ್ವಜ ಬಳಸುವಂತೆ ನಾಡಧ್ವಜ ಬಳಸುವಂತಿಲ್ಲ. ನಾಡ ಧ್ವಜಕ್ಕೆ ರಾಷ್ಟ್ರಧ್ವಜದಂತೆ ನೀತಿ ನಿಯಮ ಇರಲಿವೆ. ಹೋರಾಟಗಾರರು ಎಂದಿನಂತೆ ಕನ್ನಡ ಧ್ವಜ ಬಳಸಬಹುದು. ಆದ್ರೆ ನಾಡಧ್ವಜ ಬಳಕೆಯನ್ನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ರಾಜ್ಯೋತ್ಸವದಲ್ಲಿ ಬಳಸಬೇಕು. ಈ ಬಗ್ಗೆ ಕೇಂದ್ರ ಒಪ್ಪಿಗೆ ಕೊಟ್ಟ ಮೇಲೆ ಎಲ್ಲಾ ನೀತಿ ನಿಯಮ ಜಾರಿಯಾಗಲಿದೆ. ನಾಡಧ್ವಜಕ್ಕೆ ವಾಟಾಳ್ ನಾಗರಾಜ್ ಬಿಟ್ಟು ಇನ್ಯಾರ ವಿರೋಧವು ಇಲ್ಲ. ಎಲ್ಲರು ನಾಡಧ್ವಜವನ್ನ ಒಪ್ಪಿದ್ದಾರೆ ಅಂತ ಸಿಎಂ ತಿಳಿಸಿದ್ರು.