ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಅಂದ್ರೆ ಕನಸಲ್ಲೂ ಗಡಗಡ ನಡುಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗಲೇ ಬಂದ್ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ಉತ್ತರ ಕರ್ನಾಟಕದಲ್ಲಿ ಬಂದ್ ಮಾಡೋದು ಅಥವಾ ರಾಜಧಾನಿಯಲ್ಲಿ ಬಂದ್ ಮಾಡೋದು ಸ್ವಾಭಾವಿಕ. ಆದರೆ ಬಿಜೆಪಿಯ ದೊಡ್ಡ ಕಾರ್ಯಕ್ರಮ ಇದೆ ಎಂದು ಬಂದ್ ಮಾಡುತ್ತಿರುವ ಉದ್ದೇಶವೇ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪ್ರೇರಿತ ಬಂದ್ ಆಗಿದೆ. ನಾಲ್ಕೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ಏನೂ ಮಾಡಿಲ್ಲ. ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ. ಈ ರೀತಿಯ ರಾಜಕೀಯ ದ್ವೇಷ ಒಳ್ಳೆಯದಲ್ಲ ಎಂದರು.
ಒಂದು ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ರಾಜಕೀಯ ದ್ವೇಷ ಮಾಡೋದು ಸರಿಯಲ್ಲ. ಇದು ಅವರಿಗೇ ತಿರುಗುಬಾಣ ಆಗುತ್ತೆ. ಮಹದಾಯಿ ಹೋರಾಟಗಾರರು ಮತ್ತು ಉತ್ತರ ಕರ್ನಾಟಕದ ಜನ ನಮ್ಮ ಪರವಾಗಿದ್ದು, ಕನ್ನಡ ಪರ ಹೋರಾಟಗಾರರೇ ಬಂದ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು.
ಅಧಿಕಾರಿಗಳ ನಿರಂತರ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಅವರಿಗೆ ಕೆಲಸ ಮಾಡಲು ಆಗಲ್ಲ. ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಾ, ಸ್ವಇಚ್ಛೆಯಂತೆ ಕುಣಿಸುವುದರಿಂದ ಆಡಳಿತ ಕೆಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಬಂದ್ಗೆ ಕರೆ ನೀಡಿರುವವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು.