ರಾಯಚೂರು: ನಗರದ ಯುವತಿಯೊಬ್ಬರು ಅಕ್ಕಿ ಕಾಳುಗಳ ಮೇಲೆ ಶ್ರೀರಾಮನ ಹೆಸರು ಬರೆದು ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ರಾಯಚೂರು ನಗರದ ಶ್ರೀಕೃಷ್ಣದೇವರಾಯ ನಗರದ ನಿವಾಸಿ ರಾಜಪುರ ಕೃಷ್ಣಮೂರ್ತಿಯವರ ಮಗಳು ಗೀತಾ ರಾಣಿ 2 ಲಕ್ಷ 80 ಸಾವಿರದ 116 ಅಕ್ಕಿ ಕಾಳಿನ ಮೇಲೆ ಶ್ರೀರಾಮ ಅಕ್ಷರಗಳನ್ನ ಬರೆದು ಈಗಾಗಲೇ ವಂಡರ್ ಬುಕ್ ಆಫ್ ರೆಕಾರ್ಡ್ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಈಗ ಗಿನ್ನಿಸ್ ದಾಖಲೆ ಮಾಡುವ ಪ್ರಯತ್ನದಲ್ಲಿದ್ದಾರೆ.
ಮೊದಲಿನಿಂದಲೂ ರಾಮಭಕ್ತೆಯಾಗಿರುವ ಗೀತಾ ಎಂಬಿಎ ಮುಗಿಸಿದ್ದು ಸತತ ಆರು ತಿಂಗಳಿಂದ ಪ್ರತಿದಿನ 4 ಗಂಟೆ ಕಾಲ ರಾಮಜಪಕ್ಕೆ ಮೀಸಲಿರಿಸಿದ್ದಾರೆ. ಪ್ರತಿ ದಿನ 2000 ಅಕ್ಕಿ ಕಾಳಿನ ಮೇಲೆ ಶ್ರೀರಾಮ ಅಕ್ಷರಗಳನ್ನ ಬರೆದಿದ್ದಾರೆ.
ಈ ಅಕ್ಕಿ ಕಾಳುಗಳನ್ನ ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ನಡೆಯುವ ಶ್ರೀರಾಮ ಕಲ್ಯಾಣೋತ್ಸವಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಗಿನ್ನಿಸ್ ಸಂಸ್ಥೆಗೆ ಗೀತಾ ಅರ್ಜಿ ಹಾಕಿದ್ದು ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.