ಚಿಕ್ಕಬಳ್ಳಾಪುರ: ಶಾರ್ಟ್ ಸರ್ಕ್ಯೂಟ್ನಿಂದ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿ ಹೊತ್ತಿ ಉರಿದು ಆತಂಕ ಸೃಷ್ಟಿಯಾದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ನಗರದ ಡಿ ಕ್ರಾಸ್ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ಬಾರ್ ಹಿಂಭಾಗ ರಾಜಸ್ಥಾನ ಮೂಲದ ಸುನೀಲ್ ಎಂಬುವವರಿಗೆ ಗುಜರಿ ಅಂಗಡಿ ಹೊತ್ತಿ ಉರಿದಿದೆ. ಇಂದು ಸಂಜೆ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ.
ಗುಜರಿ ಅಂಗಡಿಯಲ್ಲಿ ಹಳೆಯ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಕಬ್ಬಿಣ ವಸ್ತುಗಳು ಶೇಖರಣೆಯನ್ನ ಮಾಡಲಾಗಿತ್ತು. ಬೆಂಕಿಯ ಕೆನ್ನಾಲಿಗೆಯ ದಟ್ಟ ಹೊಗೆ ಪ್ರದೇಶದ ಸುತ್ತಮುತ್ತ ಹಬ್ಬಿದ್ದ ಕಾರಣ ನೂರಾರು ಜನ ಆತಂಕಗೊಂಡು ಘಟನಾ ಸ್ಥಳಕ್ಕೆ ಧಾವಿಸಿದ್ದರು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.