ಶಿವಮೊಗ್ಗ: ಖಡಕ್ ಸಚಿವ ಎಂದೇ ಹೆಸರಾಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಕ್ಷೇತ್ರದಲ್ಲೇ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ.
ರಂಗಭೂಮಿ, ಕಲೆ ಸಂಸ್ಕೃತಿಗೆ ಹೆಸರಾದ ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಈ ಅಕ್ರಮ ನಡೆಯುತ್ತಿದೆ. ಅಕ್ರಮವನ್ನು ಕಣ್ಣಾರೆ ಕಾಣಲು ಸ್ಥಳಕ್ಕೆ ಪಬ್ಲಿಕ್ ಟಿವಿ ಹೋಗಿತ್ತು. ಆದ್ರೆ ಕ್ಯಾಮೆರಾ ಕಂಡೊಡನೇ ಅಕ್ರಮ ಕಾರ್ಯಚರಣೆ ಮಾಡುತ್ತಿದ್ದವರು ಎದ್ದು ಬಿದ್ದು ಓಡಿದ್ರು.
ಹೆಗ್ಗೋಡು ಗ್ರಾ.ಪಂ. ಗೆ ಸೇರಿದ ಹೆಗ್ಗಟ್ಟು, ಗೀಜಗ, ಸೊಪ್ಪಿನಮಲ್ಲಿ, ಇಂಡುವಳ್ಳಿ, ಹೆಬ್ಬರಿಗೆ ಮುಂತಾದ ಪ್ರದೇಶಗಳಲ್ಲಿ ಶರಾವತಿ ಹಿನ್ನೀರಿನಿಂದ ನಿರ್ಮಾಣವಾದ ದೊಡ್ಡ ದೊಡ್ಡ ಮರಳು ದಿಬ್ಬಗಳಿವೆ. ಈ ಪ್ರದೇಶದ ಸುಮಾರು 12 ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮರಳು ದಿಬ್ಬಗಳಿವೆ.
ಕಾನೂನು ಪ್ರಕಾರ ಇಲ್ಲಿಂದ ಮರಳು ತೆಗೆಯುವಂತಿಲ್ಲ. ಆದರೂ ಇಲ್ಲಿಂದ ಪ್ರತಿ ರಾತ್ರಿಯೂ ಕನಿಷ್ಠ ನೂರು ಲೋಡ್ ಲಾರಿ ಮರಳು ರವಾನೆ ಆಗುತ್ತದೆ. ಹಗಲು ವೇಳೆ ಇಲ್ಲಿ ಮರಳು ರಾಶಿ ಮಾಡಲಾಗುತ್ತದೆ. ರಾತ್ರಿ 8 ರಿಂದ ಮುಂಜಾನೆಯವರೆಗೂ ಲಾರಿಗಳಿಗೆ ತುಂಬಿ ಕಳಿಸಲಾಗುತ್ತದೆ.ಈ ದೃಶ್ಯಾವಳಿಯನ್ನು ಸೆರೆ ಹಿಡಿಯಲು ಪಬ್ಲಿಕ್ ಟಿವಿ ಹೋದಾಗ ಮರಳು ರಾಶಿ ಮಾಡಲಾಗುತ್ತಿತ್ತು. ಕ್ಯಾಮೆರಾ ಕಂಡೊಡನೆಯೇ ಆ ಕೆಲಸಗಾರರು ಎದ್ವೋ-ಬಿದ್ವೋ ಅಂತ ದಿಕ್ಕಾಪಾಲಾಗಿ ಓಡಿ ಪೊದೆಗಳಲ್ಲಿ ಕಣ್ಮರೆಯಾದರು.