ಯಾದಗಿರಿ: ರಾಜ್ಯದಲ್ಲಿ ಜನಪ್ರತಿನಿಧಿಗಳ ದಬ್ಬಾಳಿಕೆ ಜೋರಾಗಿದೆ. ಒಂದು ಕಡೆ ಶಾಸಕರ ಕಿರುಕುಳಕ್ಕೆ ಬೇಸತ್ತು ಮಹಿಳೆ ವಿಷಸೇವಿಸಿದ್ರೆ, ಇನ್ನೊಂದು ಕಡೆ ಶಾಸಕರ ಬೆಂಬಲಿಗನ ಹಲ್ಲೆಗೆ ನೊಂದು ಮನೆ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಹಾಪೂರದ ಕೆಜೆಪಿ ಶಾಸಕ ಗುರು ಪಾಟೀಲ್ ಕಿರುಕುಳಕ್ಕೆ ನೊಂದು ಯಾದಗಿರಿಯ ಶಿರವಾಳದಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಎದುರೇ ವಿಷ ಸೇವಿಸಿದ್ದಾರೆ. ಸರೋಜಾದೇವಿ ಎಂಬವರು ಶಿರವಾಳ ಗ್ರಾಮದಲ್ಲಿ 14 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಈ ಭೂಮಿ ಮೇಲೆ ಕಣ್ಣು ಹಾಕಿರುವ ಎಂಎಲ್ಎ ಗುರು ಪಾಟೀಲ್ ಸಂಬಂಧಿಕರು ಜಮೀನು ಕಬಳಿಸಿ ಉಳುಮೆಗೆ ಬಿಡುತ್ತಿಲ್ಲ. ಈ ಸಂಬಂಧ ಪೊಲೀಸರಿಗೆ ಸರೋಜಾದೇವಿ ದೂರು ಕೊಟ್ಟರೂ ಶಾಸಕ ಗುರು ಪಾಟೀಲ್ ಪವರ್ಗೆ ಪೊಲೀಸರ ಕ್ರಮ ಕೈಗೊಳ್ತಿಲ್ಲ. ಹೀಗಾಗಿ ಮಹಿಳೆ ಠಾಣೆಗೆ ತೆರಳಿ ವಿಷ ಸೇವಿಸಿದ್ದಾರೆ.
ಇತ್ತ, ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ಶೌಚಾಲಯ ನಿರ್ಮಾಣದ ಜಾಗದ ವಿಚಾರವಾಗಿ ಭೀಮಪ್ಪ ಅರಕೇರಿ ಮೇಲೆ ಶಾಸಕರ ಬೆಂಬಲಿಗ ಸಿದ್ದಲಿಂಗಪ್ಪ ಕುಟುಂಬ ಹಲ್ಲೆ ಮಾಡಿದೆ. ಇದ್ರಿಂದ ಮನನೊಂದು ಭೀಮಪ್ಪ ನಿನ್ನೆ ರಾತ್ರಿ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದಲಿಂಗಪ್ಪ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಬೆಂಬಲಿಗನಾಗಿದ್ದು ಪೊಲೀಸರು ಮೊದಲು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಬಳಿಕ ಒತ್ತಡಕ್ಕೆ ಮಣಿದು ಸಿದ್ದಲಿಂಗಪ್ಪ ಸೇರಿ 6 ಜನರನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಜನರೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗಾಗಿ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಮಾಡ್ತಿರೋದು ವಿಪರ್ಯಾಸವೇ ಸರಿ.