ಚಿತ್ರದುರ್ಗ: ಮರಳು ದಂಧೆಕೋರರಿಗೆ ಮರಳು ಯಾವ ಜಾಗದಾದ್ರೂ ಬರವಾಗಿಲ್ಲಾ. ಕೈ ತುಂಬಾ ಗರಿ ಗರಿ ನೋಟು ಸಿಕ್ಕರೆ ಸಾಕು. ಸ್ಮಶಾನದಲ್ಲಿ ಸಿಗೋ ಉತ್ಕೃಷ್ಠ ಮರಳಿಗಾಗಿ ಅರೆಬರೆ ಕೊಳೆತ ಶವ, ಅಸ್ಥಿಪಂಜರಗಳನ್ನೂ ಬೇರ್ಪಡಿಸಿ ರಾಜಾರೋಷವಾಗಿ ಮರಳು ಲೂಟಿ ಮಾಡ್ತಾರೆ.
ಚಿತ್ರದುರ್ಗದ ಪರಶುರಾಂಪುರ ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಮರಳು ಕುಳಗಳು ಸಮಾಧಿ ಅಂತಾನೂ ನೋಡದೇ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸ್ತಿದ್ದಾರೆ. ಪರಿಣಾಮ ಹೂತು ಹಾಕಿದ ಹೆಣಗಳ ಕೈ ಕಾಲು ಮೂಳೆ, ತಲೆಬುರುಡೆ ಮೇಲೆದ್ದು ಬರ್ತಿದೆ. ಶವಸಂಸ್ಕಾರ ಮಾಡಿ ಕೆಲವೇ ದಿನವೇ ಆದ ಶವದ ಕೆಲ ಭಾಗಗಳು ಕಾಗೆ, ತೋಳಗಳಿಗೆ ಆಹಾರವಾಗ್ತಿದೆ.
ಸ್ಮಶಾನದ ಬಳಿ ರಸ್ತೆ ಇರುವುದಿಂದ ಜನ ನಿತ್ಯ ಓಡಾಡ್ತಾರೆ. ಈ ವೇಳೆ ಅಲ್ಲಲ್ಲಿ ಬಿದ್ದಿರೋ ಮೂಳೆ, ಅಸ್ಥಿಪಂಜರ ನೋಡಿ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ಮರಳು ಧಂದೆಕೋರರು ಎಗ್ಗಿಲ್ಲದೇ ಅಕ್ರಮ ಮರಳುಗಾರಿಗೆ ನಡೆಸ್ತಿದ್ದಾರೆ. ಗ್ರಾಮದ ಬೇರೆ ಕಡೆ ಪ್ರತ್ಯೇಕ ರುದ್ರಭೂಮಿ ನಿರ್ಮಿಸಲಾಗಿದೆ. ಆದ್ರೆ ಅಲ್ಲಿನ ನೆಲ ಗಟ್ಟಿ ಅನ್ನೋ ಕಾರಣಕ್ಕೆ ನದಿ ಮರಳಲ್ಲೇ ಶವ ಹೂಳ್ತಿದ್ದಾರೆ. ಇದಕ್ಕೆ ಸ್ಥಳೀಯ ಪಂಚಾಯತ್ ಕಡಿವಾಣ ಹಾಕಬೇಕಿದೆ.
ಒಟ್ಟಿನಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಇಲ್ಲವೆಂದಲ್ಲಿ ಬೇರೆಡೆ ಶವ ಹೂಳುವ ವ್ಯವಸ್ಥೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.