– ಐವರು ಆರೋಪಿಗಳ ಬಂಧನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕೋಮು ಗಲಭೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿರುವಾಗಲೇ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ನಡೆದಿತ್ತು. ಜೂನ್ 21ರಂದು ಮಧ್ಯಾಹ್ನ ನಡೆದ ಹತ್ಯೆ ಭಾರೀ ಸುದ್ದಿಯಾಗಿತ್ತು.
ಮಂಗಳೂರು ಪೊಲೀಸರು ಜಂಟಿಕಾರ್ಯಾಚರಣೆ ನಡೆಸಿ ಎರಡೇ ದಿನದಲ್ಲಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಟ್ವಾಳದ ಆಸುಪಾಸಿನ ನಿವಾಸಿಗಳಾದ ಪವನ್ ಕುಮಾರ್, ಅಭಿನ್ ರೈ, ಶಿವಪ್ರಸಾದ್, ಸಂತೋಷ್ ಮತ್ತು ರಂಜಿತ್ ಬಂಧಿತ ಆರೋಪಿಗಳು.
ಆರೋಪಿಗಳ ಪೈಕಿ ನಾಲ್ವರ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಈಗಾಗ್ಲೆ ಹಲವಾರು ಕೇಸುಗಳಿವೆ. ಅಲ್ಲದೆ, ಈ ಹಿಂದೆ ಕೋಮು ಗಲಭೆಯಲ್ಲಿ ಗುರುತಿಸಿಕೊಂಡಿದ್ದರು. ಆದರೆ ಅಶ್ರಫ್ ಹತ್ಯೆಯನ್ನು ಯಾವ ಕಾರಣಕ್ಕೆ ನಡೆಸಿದ್ದಾರೆ ಅನ್ನೋದ್ರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯ ಕಾರಣ, ಹಿಂದಿರುವ ಶಕ್ತಿಗಳೂ ಬೆಳಕಿಗೆ ಬರಲಿದೆ. ಪದೇ ಪದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡವರ ವಿರುದ್ಧ ಗೂಂಡಾ ಕಾಯಿದೆ ಹಾಕಲಾಗುವುದು ಅಂತಾ ಐಜಿಪಿ ಹೇಳಿದ್ದಾರೆ.
ಕೊಲೆಯ ಪ್ರಮುಖ ಆರೋಪಿ ಭರತ್ ಕುಮ್ಡೋಲು ತಲೆಮರೆಸಿಕೊಂಡಿದ್ದಾನೆ. ಈತ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಶಿಷ್ಯ ಅಂತ ಹೇಳಲಾಗ್ತಿದೆ. ಯಾಕಂದ್ರೆ, ಕಳೆದ ತಿಂಗಳ 28 ರಂದು ಪ್ರಭಾಕರ್ ಭಟ್ಟರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಭರತ್ ಕಾಣಿಸಿಕೊಂಡಿದ್ದನು ಎನ್ನಲಾಗಿದೆ.
ಹೀಗಾಗಿ, ಬಂಟ್ವಾಳದ ಬೆಂಜನಪದವು ಬಳಿ ನಡೆದ ಆಶ್ರಫ್ ಮರ್ಡರ್ ಕೇಸ್ಗೂ ಭಟ್ಟರಿಗೂ ನಂಟಿದ್ಯಾ ಅನ್ನೋ ಅನುಮಾನ ಎದ್ದಿದೆ. ಆದರೆ, ಭರತ್ ಕುಮ್ಡೇಲು ಹಾಗೂ ದಿವ್ಯರಾಜ್ ಶೆಟ್ಟಿ, ಕೊಲೆಗೆ ಸಂಚು ರೂಪಿಸಿದವರಾಗಿದ್ದು ಇನ್ನೆರಡು ದಿನಗಳಲ್ಲಿ ಬಂಧಿಸುವುದಾಗಿ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.