ಕಲಬುರಗಿ: ಇಂದು ರಾಜ್ಯಾದ್ಯಂತ ವಿಳಂಬನಾಮಿ ಸಂವತ್ಸರದ ಯುಗಾದಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಬಿಸಿಲನಾಡು ಕಲಬುರಗಿಯಲ್ಲಿ ಪುಟಾಣಿ ಮಕ್ಕಳು ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಕಲಬುರಗಿಯ ಉದನೂರ ರಸ್ತೆಯ ಹಿರೇಗೌಡ ಲೇಔಟ್ ನಲ್ಲಿರೋ ಅಪ್ಪಾಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯುಗಾದಿ ಮುನ್ನಾ ದಿನ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳೆಲ್ಲಾ ಪಕ್ಕಾ ಹಳ್ಳಿಸೊಗಡಿನಲ್ಲಿ ಶಾಲೆಗೆ ಆಗಮಿಸಿದ್ದರು. ಶಾಲಾ ಬಾಲಕಿಯರೆಲ್ಲಾ ಹಣೆಯಲ್ಲಿ ಕುಂಕುಮ ಬೊಟ್ಟು, ಮುಡಿಯಲ್ಲಿ ಮಲ್ಲಿಗೆ ಹೂವು, ಹಸಿರು ಇಳಕಲ್ ಸೀರೆ ತೊಟ್ಟು ಬಂದಿದ್ದರೆ, ಬಾಲಕರೆಲ್ಲಾ ಬಿಳಿ ಅಂಗಿ, ಪಂಚೆ ತೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿ ಅತಿಥಿ ಗಣ್ಯರಿಗೆಲ್ಲಾ ಬೇವು-ಬೆಲ್ಲ ಹಂಚಿ ಸಂಭ್ರಮಿಸಿದರು.
ಬೇವು ಬೆಲ್ಲದ ಪಾನಕವಿರುವ ಬಿಂದಿಗೆ ಪೂಜೆ ಸಲ್ಲಿಸುವ ಮೂಲಕ ಹಿರಿಯ ಸಾಹಿತಿ ಡಾ.ಸ್ವಾಮಿರಾವ್ ಕಾರ್ಯಕ್ರಮ ಉದ್ಘಾಟಿಸಿದರು.