ಬಳ್ಳಾರಿ: ಅಪಘಾತವಾದಾಗ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಯಾರು ಮುಂದೆ ಬರಲ್ಲ, ಗಾಯಾಳುಗಳನ್ನು ಕರೆದೊಯ್ಯುವ ಅಂಬುಲೆನ್ಸ್ ಗಳಿಗೆ ದಾರಿನೂ ಸಹ ಕೊಡಲ್ಲ. ಹೀಗಾಗಿ ಅಂಬುಲೆನ್ಸ್ ಗಳಿಗೆ ದಾರಿ ಕೊಡಿ ರೋಗಿಗಳ ಜೀವ ಉಳಿಸಿ ಎಂದು ಬಳ್ಳಾರಿ ಪೊಲೀಸರು ಜಾಗೃತಿ ಆರಂಭಿಸಿದ್ದಾರೆ. ಪೊಲೀಸರ ಈ ವಿನೂತನ ಕಾರ್ಯಕ್ಕೆ ಸ್ಯಾಂಡಲವುಡ್ ನಟ-ನಟಿಯರು ಸಹ ಸಾಥ್ ನೀಡಿದ್ದಾರೆ.
ಅಂಬುಲೆನ್ಸ್ ಗಳಿಗೆ ಅಡ್ಡವಾಗುವ ಜನರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿಯ ತೋರಣಗಲ್ ಠಾಣೆಯ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಜಾಗೃತಿ ಆರಂಭಿಸಿದ್ದಾರೆ. ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ರೋಗಿಗಳ ಪ್ರಾಣ ಉಳಿಸಿ ಎಂದು ಜಾಗೃತಿ ಆರಂಭಿಸುವ ಮೂಲಕ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ.
ತೋರಣಗಲ್ ಪೊಲೀಸ್ ಠಾಣೆಯ ಪಿಎಸ್ಐ ಮೊಹ್ಮದ್ ರಫೀಕ್ ಅವರ ಈ ವಿನೂತನ ಕಾರ್ಯಕ್ಕೆ ಬಳ್ಳಾರಿ ಪೊಲೀಸರು ಸಾಥ್ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆಟೋ, ಲಾರಿ, ಟಾಕ್ಸಿ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.
ತೋರಣಗಲ್ ಪೊಲೀಸರ ಈ ವಿನೂತನ ಜಾಗೃತಿಗೆ ಸ್ಯಾಂಡಲ್ ವುಡ್ ತಾರೆಯರಾದ ಯಶ್, ಪ್ರೇಮ್, ದಿಗಂತ್, ಐಂದ್ರಿತಾ ರೈ ಹಾಗೂ ಮೇಘನಾ ಗಾಂವ್ಕರ್ ಸಹ ಕೈ ಜೋಡಿಸಿ ಜನರಿಗೆ ಅಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡುವಂತೆ ಸಂದೇಶ ಸಾರುತ್ತಿದ್ದಾರೆ.
ಬಳ್ಳಾರಿ ಪೊಲೀಸರು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಂಬುಲೆನ್ಸ್ ಗಳಿಗೆ ದಾರಿ ಬಿಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ, ಬಳ್ಳಾರಿ ಪೊಲೀಸರ ಈ ವಿನೂತನ ಕಾರ್ಯಕ್ಕೆ ಹಲವಾರು ವಿದೇಶಗಳ ರಾಯಭಾರಿಗಳು ಹಾಗೂ ಮಾಜಿ ವಿಶ್ವ ಸುಂದರಿಯರು ಸಹ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪೊಲೀಸರ ಜಾಗೃತಿಗೆ ಕೈಜೋಡಿಸಿ ಅಂಬುಲೆನ್ಸ್ ಗಳ ಮಹತ್ವವನ್ನು ಸಾರುತ್ತಿದ್ದಾರೆ.