ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವು ಬರೀ ಸ್ಯಾಂಡಲ್ವುಡ್ ಗೆ ಸೀಮಿತವಾಗಿರದೆ ಬಾಲಿವುಡ್ ನಲ್ಲೂ ಜನಪ್ರಿಯವಾಗಿದೆ.
ಈಗಾಗಲೇ ಕೋಟ್ಯಾಧಿಪತಿ ಕಾರ್ಯಕ್ರಮದ ಎರಡು ಸೀಸನ್ ಗಳು ಮುಗಿದಿದ್ದು, ಮೂರನೇ ಸೀಸನ್ ಶುರು ಮಾಡಲು ಖಾಸಗಿ ವಾಹಿನಿ ಸಿದ್ಧತೆ ನಡೆಸುತ್ತಿದೆ. ಆದರೆ ಈಗ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಬದಲು ನಟ ಯಶ್ ಇರುತ್ತಾರೆ ಎನ್ನಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪುನೀತ್ ಮತ್ತು ಯಶ್ ಬದಲಿಗೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ.
ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಖ್ಯಾತಿ ಹೊಂದಿರುವ ನಟ ರಮೇಶ್ ಅರವಿಂದ್ ಈಗ `ಕನ್ನಡ ಕೋಟ್ಯಾಧಿಪತಿ’ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಬರುವ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಕೊನೆಯ ಹಂತದ ಅಂದರೆ ಅಗ್ರಿಮೆಂಟ್ ಗಳಿಗೆ ರಮೇಶ್ ಸಹಿ ಹಾಕಿದರೆ ಕಾರ್ಯಕ್ರಮದ ನಿರೂಪಣೆ ಮಾಡುವುದು ಅಧಿಕೃತವಾಗಲಿದೆ.
ನಟ ಪುನೀತ್ ರಾಜ್ ಕುಮಾರ್ ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಪುನೀತ್ `ಫ್ಯಾಮಿಲಿ ಪವರ್’ ಕಾರ್ಯಕ್ರಮವನ್ನು ಮುಗಿಸಿದ್ದಾರೆ. ಬಳಿಕ `ನಟ ಸಾರ್ವಭೌಮ’ ಸಿನಿಮಾದ ಶೂಟಿಂಗ್ ಆರಂಭವಾಗುತ್ತದೆ. ಅಷ್ಟೇ ಅಲ್ಲದೇ ಸಂತೋಷ್ ಆನಂದ್ ರಾಮ್ ನಿರ್ದೇಶಕದಲ್ಲಿ ಮೂಡಿಬರುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಬೇಕಾಗಿದೆ. ಈ ಕಾರಣದಿಂದ ಅವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.