ಬೆಂಗಳೂರು: ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ವಿಚಾರದಲ್ಲಿ ಕಮಲ ಪಡೆ ಹಿಂದೆ ಬಿದ್ದಿದ್ದು, ಕಾಂಗ್ರೆಸ್ ಮುಂದಿದೆ ಎನ್ನುವ 2 ಪ್ರತ್ಯೇಕ ಗುಪ್ತ ವರದಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೈ ಸೇರಿದೆ.
ಅಮಿತ್ ಶಾ ಟೀಂನ ಒಂದು ವರದಿ, ಆರ್ಎಸ್ಎಸ್ ನಿಂದ ಸಲ್ಲಿಕೆಯಾಗಿರುವ ವರದಿಯಲ್ಲಿ ಪಕ್ಷ ಸಂಘಟನೆ, ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಓಟ ಜೋರಾಗಿದೆ ಎನ್ನುವ ಅಂಶಗಳು ಪ್ರಸ್ತಾಪವಾಗಿದೆ ಎನ್ನುವ ವಿಚಾರ ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
ಸೋಮವಾರ ಅಮಿತ್ ಶಾಗೆ 2 ಗುಪ್ತ ವರದಿಗಳು ತಲುಪಿದ್ದು, ಈ ವರದಿ ನೋಡಿ 2014ರ ಲೋಕಸಭೆ ಮತ್ತು ಉತ್ತರ ಪ್ರದೇಶ ಚುನಾವಣೆಯ ಚಾಣಾಕ್ಷ ಅಮಿತ್ ಶಾ ಅವರು ದಿಗಿಲುಗೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ವರದಿಯಲ್ಲಿ ಏನಿದೆ?
ಕಾಂಗ್ರೆಸ್ ಉಸ್ತುವಾರಿಯಾಗಿ ವೇಣುಗೋಪಾಲ್ ನೇಮಕವಾದ ಮೇಲೆ ಕೈ ಟೀಂ ತುಂಬಾ ಸಕ್ರಿಯವಾಗಿದೆ. ರಾಹುಲ್ ಗಾಂಧಿಗೆ ಕರ್ನಾಟಕವೇ ಟಾರ್ಗೆಟ್ ಆಗಿದ್ದು, ಬೆಂಗಳೂರಿನಿಂದಲೇ ಪವರ್ ಸೆಂಟರ್ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಹವಾ ಬಿಟ್ಟರೆ ಬೇರೆ ಯಾವ ಹವಾ ಇಲ್ಲ. ನಿಮ್ಮ 150 ಟಾರ್ಗೆಟ್ ಅನ್ನು 90 ಗೆ ತಂದು ನಿಲ್ಲಿಸಲು ಕೈ, ಜೆಡಿಎಸ್ ಪ್ಲಾನ್ ಮಾಡುತ್ತಿದೆ. ದೇವೇಗೌಡರೂ ಕೂಡ ಫುಲ್ ಆಕ್ಟೀವ್ ಆಗಿದ್ದಾರೆ. ಹೀಗಾಗಿ ಬಿಜೆಪಿ ಸಂಘಟನಾ ಚಟುವಟಿಕೆ ಮಂಕಾಗಿದೆ. ಸದ್ಯ ಬಿಜೆಪಿ ಅಪಾಯದ ವಲಯದಲ್ಲಿದ್ದು, ಈ ಅಪಾಯದಿಂದ ಹೊರಬರಲು ಈಗಲೇ ಪ್ಲಾನ್ ಮಾಡಬೇಕು ಎನ್ನುವ ಅಂಶ ವರದಿಯಲ್ಲಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು 9 ವರ್ಷದ ಬಳಿಕ ಕಾಂಗ್ರೆಸ್ ಬೆಂಗಳೂರಿನಲ್ಲೇ ಆರಂಭಿಸ್ತಿರೋದು ಯಾಕೆ?