ಕಲಬುರಗಿ: ನೋಟ್ ಬ್ಯಾನ್ ಆಗಿ ಇವತ್ತಿಗೆ ಒಂದು ವರ್ಷವಾದರೂ ಇನ್ನೂ ಕಪ್ಪುಹಣದ ಛಾಯೆ ಮುಗಿದಿಲ್ಲ. ಜಿಲ್ಲೆಯಲ್ಲಿ ಪೊಲೀಸರು ಫೈನಾನ್ಸ್ ಮೇಲೆ ದಾಳಿ ಮಾಡಿದ್ದು, 50 ಲಕ್ಷ ರೂ. ಕಾಳಧನ ಪತ್ತೆಯಾಗಿದೆ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಗಾಯಕವಾಡ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ಸೇರಿದಂತೆ ಇತರೆ ಮೂವರು ಮೀಟರ್ ಬಡ್ಡಿ ದಂಧೆಕೋರನ್ನೂ ಕೂಡ ಬಂಧಿಸಲಾಗಿದೆ. ಮೀನಾಕ್ಷಿ ಕಾಂತಾ, ನಾಗರಾಜ್ ಕಲಶೆಟ್ಟಿ ಮತ್ತು ಶ್ರೀಕಾಂತ ಒಂಟಿ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಕರಣ್ ಗಾಯಕವಾಡ್ ಮೀಟರ್ ಬಡ್ಡಿ ಮೂಲಕ ಜನರ ಬಳಿ ಹಣವನ್ನು ವಸೂಲಿ ಮಾಡುತ್ತಿದ್ದನು. ಈತನ ಬಗ್ಗೆ ಖಚಿತವಾದ ಮಾಹಿತಿ ಪಡೆದು ನಂತರ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಾಖಲೆಯಿಲ್ಲದ 2000, 500 ಹಾಗೂ 100 ರೂ. ಮುಖಬೆಲೆಯ 40 ಲಕ್ಷ ರೂಪಾಯಿ ಹಣ ಮತ್ತು ದಾಖಲಾತಿಗಳು ದೊರೆತಿವೆ. ಈ ಎಲ್ಲಾ ಪ್ರಕರಣದಲ್ಲಿ ಒಟ್ಟು 50 ಲಕ್ಷ ರೂ. ಕಾಳಧನ ಪತ್ತೆಯಾಗಿದೆ.
ಈ ಕುರಿತು ಕಲಬುರಗಿಯ ಆರ್ ಜೆ. ಬ್ರಹ್ಮಪೂರ್ ಠಾಣೆ ಹಾಗೂ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.