ಕಲಬುರಗಿ: ಕಲಬುರಗಿ ನಗರದ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್ ಕರಿಚಿರತೆಯನ್ನು ಪೊಲೀಸರು ಇಂದು ಬೆಳಗಿನ ಜಾವ ಎನ್ಕೌಂಟರ್ ಮಾಡಿದ್ದಾರೆ.
ಜುಲೈ 7 ರಂದು ನಂದೂರ ಗ್ರಾಮದ ಲಕ್ಷ್ಮಿಕಾಂತ ಎಂಬವನನ್ನು ರೌಡಿ ಕರಿ ಚಿರತೆ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದ.
ನಂತರ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಬೆಳಗ್ಗೆ ನಗರದ ಹೊರವಲಯದ ಗ್ರೀನ್ ಸಿಟಿ ಆಶ್ರಯ ಕಾಲೋನಿ ಬಳಿ ಕರಿ ಚಿರತೆ ಅಡಗಿರುವ ಮಾಹಿತಿ ಮೇಲೆ ದಾಳಿ ಮಾಡಿ ಶೂಟೌಟ್ ಮಾಡಿದ್ದಾರೆ.
ಕಾರ್ಯಾಚರಣೆ ವೇಳೆ ಕರಿಚಿರತೆ ಹಾರಿಸಿದ ಗುಂಡು ಡಿವೈಎಸ್ಪಿ ಹುಲ್ಲೂರ ಅವರಿಗೆ ತಾಗಿದೆ. ಆದರೆ ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಂಡಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.
ಕರಿಚಿರತೆ ಜೊತೆಗಿದ್ದ ಇಬ್ಬರು ಆರೋಪಿಗಳು, ಪೇದೆಗಳಾದ ಆನಂದ ಮತ್ತು ಶ್ರೀಶೈಲ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇದೀಗ ಗಾಯಗೊಂಡ ಪೊಲೀಸರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.