ರಾಯಚೂರು: ಮನೆಗೆ ನುಗ್ಗಿದ ದರೋಡೆಕೋರರು ಮನೆ ಯಜಮಾನನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಸೀಕಲ್ ತಾಂಡದಲ್ಲಿ ನಡೆದಿದೆ.
55 ವರ್ಷದ ಠಾಕಪ್ಪ ಕೊಲೆಯಾದ ವ್ಯಕ್ತಿ. ಮಧ್ಯ ರಾತ್ರಿ ವೇಳೆ ಮನೆ ಬಾಗಿಲು ಬಡಿದು ಅತಿಥಿಗಳಂತೆ ಒಳ ಬಂದ ಮೂರು ಜನ ದರೋಡೆಕೋರರು ಮಾರಕಾಸ್ತ್ರಗಳಿಂದ ಹೆದರಿಸಿ ಹಣ, ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ಟ್ರಂಕ್ ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣ ಕೊಡದಿದ್ದಕ್ಕೆ ಠಾಕಪ್ಪರಿಗೆ ರಾಡ್ ನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಮಧ್ಯಾಹ್ನ ಆದ್ರೆ ಸಾಕು ಮನೆಗಳ್ಳತನ ಗ್ಯಾರಂಟಿ
ಬೈಕ್ ನಲ್ಲಿ ಬಂದಿದ್ದ ಮೂರು ಜನ ದರೋಡೆಕೋರರು ಟ್ರಂಕ್ ಸಹಿತ ಪರಾರಿಯಾಗಿದ್ದಾರೆ. ಮಹಿಳೆಯರ ಮೈ ಮೇಲಿನ ಚಿನ್ನಾಭರಣ, 1 ಲಕ್ಷಕ್ಕೂ ಹೆಚ್ಚು ನಗದು ದರೋಡೆಯಾಗಿದೆ. ಘಟನೆ ಹಿನ್ನೆಲೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾನ್ವಿ ತಾಲೂಕೊಂದರಲ್ಲೇ ಕಳೆದ ಒಂದು ವಾರದಲ್ಲಿ ಮೂರು ದರೋಡೆ ಪ್ರಕರಗಳು ನಡೆದಿವೆ. ಒಂದೇ ದರೋಡೆಕೋರರ ಗುಂಪು ಕೃತ್ಯ ಎಸಗುತ್ತಿರಬಹುದು ಎನ್ನಲಾಗಿದೆ.