ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿ ಕ್ಯಾಮೆರಾ ಜಖಂಗೊಳಿಸಿದ್ದಾರೆ. ರಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕುರಿತ ವರದಿ ಮಾಡಲು ಮುಂದಾಗಿದ್ದಕ್ಕೆ ಗೂಂಡಾವರ್ತನೆ ತೋರಿದ್ದಾರೆ.
ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ 21 ದಿನಗಳ ಹೆಣ್ಣು ಮಗು ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣಬಿಟ್ಟಿದೆ. ಶಕ್ತಿನಗರದ ನಿವಾಸಿಗಳಾದ ಮರಿಯಪ್ಪ ಜಮಸಮ್ಮ ದಂಪತಿಯ ಮಗು ಮಲಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಹೇಳಿದಂತೆ ಪೋಷಕರು ಖಾಸಗಿ ಪ್ರಯೋಗಾಲಯದಲ್ಲೇ ಸ್ಕ್ಯಾನಿಂಗ್, ಎಕ್ಸ್ ರೇ, ರಕ್ತಪರೀಕ್ಷೆಯನ್ನೂ ಮಾಡಿಸಿದ್ರು. ಆದ್ರೆ ಸಮಯಕ್ಕೆ ಸರಿಯಾಗಿ ಬಂದು ಶಿಶುವನ್ನ ವೈದ್ಯರು ತಪಾಸಣೆ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆ.
ಎಲ್ಲಾ ಪರೀಕ್ಷೆಗಳ ವರದಿಯನ್ನ ಪರಿಶೀಲಿಸಿ ವೈದ್ಯರು ಸಮಸ್ಯೆಯಿಲ್ಲ ಅಂತ ಹೇಳಿದ್ದರು. ಆದ್ರೆ ಏಕಾಏಕಿ ಮಗು ಪ್ರಾಣಬಿಟ್ಟಿದೆ ಅಂತ ಪೋಷಕರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ವರದಿಗೆ ತೆರಳಿದ ಮಾಧ್ಯಮದವರ ಮೇಲೂ ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕ್ಯಾಮೆರಾ ಕಿತ್ತುಕೊಂಡು ಹಾಳು ಮಾಡಿದ್ದಾರೆ.