ಉಡುಪಿ: ಜಿಲ್ಲೆಯ ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ರಹಸ್ಯ ಇದೀಗ ಬೆಳಕಿಗೆ ಬಂದಿದೆ.
ತಾಲೂಕಿನ ಶಿರ್ವ ಗ್ರಾಮದ ಪಡುಬೆಳ್ಳೆಯ ಶಂಕರ ಆಚಾರ್ಯ (50) ನಿರ್ಮಲಾ ಆಚಾರ್ಯ( 44) ಅವರ ಮಕ್ಕಳಾದ ಶ್ರೇಯಾ( 22) ಶೃತಿ (23) ಎಂಬ ಒಂದೇ ಕುಟುಂಬದವರು ಜುಲೈ 13ರಂದು ಸೆನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದ್ರೆ ಇದೀಗ ನಕಲಿ ಚಿನ್ನ ಅಡವಿಟ್ಟು ಸಾಲ ತೆಗೆದಿದ್ದೇ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆಂದು ತಿಳಿದುಬಂದಿದೆ.
ಮೃತ ಶಂಕರ ಆಚಾರ್ಯ ಅವರು ಇನ್ನಂಜೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನ ಕುಂಜಾರುಗಿರಿ ಶಾಖೆಯಲ್ಲಿ ಸುಮಾರು 3 ಕೆ.ಜಿಯಷ್ಟು ನಕಲಿ ಚಿನ್ನ ಅಡ ಇರಿಸಿದ್ದರು. 64 ಲಕ್ಷ ರೂಪಾಯಿ ಸಾಲ ಪಡೆಯಲೆಂದು ಈ ಚಿನ್ನವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಶಂಕರ್ ಆಚಾರ್ಯ ಅವರು ಕಳೆದ 30 ವರ್ಷದದಿಂದ ಪಡುಬೆಳ್ಳೆಯಲ್ಲಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದರು. ಶ್ರೇಯಾ ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಶೃತಿ ಮೂಡುಬಿದರೆಯಲ್ಲಿ ಎಂಬಿಎ ಪೂರ್ಣಗೊಳಿಸಿ, ಸಿಎ ಪರೀಕ್ಷೆ ಪಾಸಾಗಿದ್ದು, ಹೈದರಾಬಾದ್ನಲ್ಲಿ ಉದ್ಯೋಗದಲ್ಲಿರುವ ಕಾರ್ಕಳ ನಿವಾಸಿಯೊಂದಿದೆ ಆಗಸ್ಟ್ ನಲ್ಲಿ ಮದುವೆ ನಿಶ್ಚಿತವಾಗಿತ್ತು.
ಪ್ರಕರಣ ಸಂಬಂಧ ಶಿರ್ವ ಪೊಲೀಸರು ತನಿಖೆ ಕೈಗೊಂಡಿದ್ದು, ಇದೀಗ ಸೊಸೈಟಿ ಮ್ಯಾನೇಜರ್ ಉಮೇಶ್ ಅಮೀನ್, ಸರಾಫ(ಅಸಲಿ-ನಕಲಿ ಚಿನ್ನ ಪರೀಕ್ಷಕ) ಉಮೇಶ್ ಆಚಾರ್ಯ ಬಂಧಿಸಿ ವಿಚಾರಣೆ ನಡೆಸಿದ್ದಾರೆ.