ಚಿಕ್ಕಬಳ್ಳಾಪುರ: ಡ್ಯೂಕ್ ಬೈಕ್ ಗೆ ಬಾಲಕಿ ಬಲಿಯಾದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಡ್ಯೂಕ್ ಬೈಕ್ ಸವಾರರನ್ನ ಅಡ್ಡಗಟ್ಟಿ ಥಳಿಸಿರೋ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಬುಳ್ಳಹಳ್ಳಿ ಗೇಟ್ ಬಳಿ ಭಾನುವಾರ ಈ ಘಟನೆ ನಡೆದಿತ್ತು. ತಂದೆಯೊಂದಿಗೆ ತೆರಳುತ್ತಿದ್ದ 11 ವರ್ಷದ ಅಂಜು ಡ್ಯೂಕ್ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆಪಘಾತದ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಡ್ಯೂಕ್ ಬೈಕ್ ಚಾಲಕನನ್ನ ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಹೆದ್ದಾರಿ ತಡೆ ಕೂಡ ನಡೆಸಿದ್ದರು.
ಇದೇ ವೇಳೆ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದ ಇತರೆ ಡ್ಯೂಕ್ ಬೈಕ್ ಸವಾರರನ್ನ ಅಡ್ಡಗಟ್ಟಿದ ಆಕ್ರೋಶಿತ ಗ್ರಾಮಸ್ಥರು, ಡ್ಯೂಕ್ ಬೈಕ್ ಸವಾರರನ್ನ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಈಗ ವಾಟ್ಸಪ್ ಹಾಗೂ ಫೇಸ್ ಬುಕ್ನಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ಹೆದ್ದಾರಿ 7 ಚಿಕ್ಕಬಳ್ಳಾಪುರದ ಕಡೆಗೆ ಯಾರೂ ಡ್ಯೂಕ್ ಬೈಕ್ ಸವಾರರು ತೆರಳಬೇಡಿ. ಅಪಘಾತ ಆಗಿದೆ, ಗ್ರಾಮಸ್ಥರು ಹಲ್ಲೆ ಮಾಡುತ್ತಾರೆ ಎಂದು ಮಾಹಿತಿ ಶೇರ್ ಮಾಡುತ್ತಿದ್ದಾರೆ.
ಡ್ಯೂಕ್ ಬೈಕ್ ಸವಾರರು ಸೇರಿದಂತೆ ಇತರೆ ಕಾಸ್ಟ್ಲೀ ಬೈಕ್ ಹೊಂದಿರುವ ಸಿಲಿಕಾನ್ ಸಿಟಿ ಜನ ವಿಕೇಂಡ್ ಸೇರಿದಂತೆ ರಜಾ ದಿನಗಳಲ್ಲಿ ರೇಸಿಂಗ್ ಎಂದು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅತೀ ವೇಗದ ಚಾಲನೆ ಮಾಡೋದು ಮಾಮೂಲಿಯಾಗಿದೆ. ಇದರಿಂದಲೇ ಬಾಲಕಿ ಬಲಿಯಾದಳು ಎಂದು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.