ದಾವಣಗೆರೆ: ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ದಾವಣಗೆರೆಯ ರೈಲ್ವೆ ಸ್ವಚ್ಛತೆ ಮಾಡುವ ಮಹಿಳಾ ಸಿಬ್ಬಂದಿ ನಿಲ್ದಾಣದಲ್ಲೇ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಬೆಳಕಿಗೆ ಬಂದಿದೆ.
ನಿಲ್ದಾಣದಲ್ಲಿ ಬೇರೊಬ್ಬ ಸಿಬ್ಬಂದಿ ಜೊತೆ ಮಾತನಾಡುತ್ತ ಕುಳಿತಿದ್ದರು ಅನ್ನೋ ಕಾರಣಕ್ಕೆ ಐದು ದಿನಗಳ ಹಿಂದೆ ಶೌಚಾಲಯ ಹಾಗೂ ನಿಲ್ದಾಣ ಸ್ವಚ್ಛಗೊಳಿಸುವ ರೇಣುಕಮ್ಮ ಅವರನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅಲ್ಲದೇ ರೇಣುಕಮ್ಮಗೆ ಮೇಲ್ವಿಚಾರಕಿ ಗಂಗಮ್ಮ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ರೈಲ್ವೇ ನಿಲ್ದಾಣಕ್ಕೆ ಬಂದು ಕೆಲಸ ಕೊಡಿ ಅಂತ ಕೇಳಿಕೊಂಡ್ರೂ ಗಂಗಮ್ಮ ಕೆಲಸ ನೀಡೋದಕ್ಕೆ ನಿರಾಕರಿಸಿದ್ರಿಂದ ಮನನೊಂದ ರೇಣುಕಮ್ಮ ನಿಲ್ದಾಣದಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರು. ಕೂಡಲೇ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.