ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸವಾಲಾಗಿದ್ದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೈಟೆಕ್ ಬಸ್ ಏರಿ ಸುತ್ತಾಡಿದ್ದು, ಇದೀಗ ಇದೇ ಬಸ್ಸಲ್ಲಿ ರಾಜ್ಯದಲ್ಲೂ ಸುತ್ತಲು ನಿರ್ಧರಿಸಿದ್ದಾರೆ.
ದೆಹಲಿ ರಿಜಿಸ್ಟ್ರೇಶನ್ ನಂಬರ್ ಹೊಂದಿರುವ ಅದೃಷ್ಟದ ಬಸ್ಸನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬಸ್ಸಿನ ಸ್ಟಿಕರ್ ಬದಲಿಸಿ ಅದೇ ಬಸ್ಸಿನಲ್ಲಿ ರಾಜ್ಯದಲ್ಲೂ ಯಾತ್ರೆಗೆ ನಿರ್ಧಾರ ಮಾಡಿದ್ದಾರೆ. ಸದ್ಯ ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಬಸ್ ಈಗಾಗಲೇ ಬೆಂಗಳೂರು ತಲುಪಿದ್ದು, ನಗರದ ಅರಮನೆ ಮೈದಾನದಲ್ಲಿ ಶೃಂಗಾರಗೊಳ್ಳುತ್ತಿದೆ. ಬಸ್ನ ಚಾಲಕ ಹಾಗೂ ತಾಂತ್ರಿಕ ಸಿಬ್ಬಂದಿಯೂ ದೆಹಲಿಯಿಂದಲೇ ಬಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?
ಬಸ್ ನ ವಿಷೇಶತೆಗಳೇನು?: ಹವಾನಿಯಂತ್ರಿತ ಈ ಬಸ್ನಲ್ಲಿ ಆರಾಮವಾಗಿ ಕುಳಿತುಕೊಳ್ಳುವ ವ್ಯವಸ್ಥೆ, ಮಲಗಿ ವಿಶ್ರಾಂತಿ ಪಡೆಯಲು ಹಾಸಿಗೆಯ ವ್ಯವಸ್ಥೆಯೂ ಇದೆ. ಜೊತೆಗೆ, ಶೌಚಾಲಯವಿದೆ. ಫೆ.10 ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಬಳಿಕ ಅವರು ಈ ಬಸ್ನಲ್ಲಿ ಹೊಸಪೇಟೆಯಲ್ಲಿ ಜಾಥಾ ಮುಗಿಸಿ ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಭಾಗದಲ್ಲಿ ಸಂಚರಿಸಲಿದ್ದಾರೆ ಎಂಬುದಾಗಿ ಕೆಪಿಸಿಸಿ ಮೂಲಗಳಿಂದ ತಿಳಿದುಬಂದಿದೆ.
ಇದೇ ವೇಳೆ ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರೂ ಅವರೊಟ್ಟಿಗೆ ಪ್ರಯಾಣ ಮಾಡುವ ಮೂಲಕ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹೆಚ್ಡಿಕೆ ಚುನಾವಣಾ ಪ್ರಚಾರಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್: ಒಳಗಡೆ ಏನೆಲ್ಲಾ ಇದೆ ಗೊತ್ತಾ!
ಈ ಮೊದಲು ಹೈಟೆಕ್ ಬಸ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ `ಪರಿವರ್ತನಾ ಯಾತ್ರೆ’ ಕೈಗೊಂಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಸುಮಾರು ಒಂದು ಕೋಟಿ ರೂ. ವೆಚ್ಚದ ಅತ್ಯಾಧುನಿಕ ಬಸ್ಸನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದಾರೆ.