ಕೋಲಾರ: ಆ ಊರಲ್ಲಿರೋ ಅಂಗನವಾಡಿಯ ಮಕ್ಕಳಿಗೆ ಗಂಗಮ್ಮ ದೇವಿಯೇ ಆಶ್ರಯ. ಪಾಠ ಕಲಿಸೋ ಶಿಕ್ಷಕಿ, ಅಡುಗೆ ಮಾಡೋ ಅಡುಗೆಯವರನ್ನೂ ಗಂಗಮ್ಮ ತಾಯಿ ಕಾಪಾಡುತ್ತಿದ್ದಾಳೆ.
ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ವರದೇನಹಳ್ಳಿಯಲ್ಲಿ ಬಿದ್ದು ಹೋಗುವ ಕಟ್ಟಡದಲ್ಲಿ ಹತ್ತಾರು ಮಕ್ಕಳು ಪಾಠ ಕೇಳುತ್ತಿದ್ದರು. ಬಡವರು-ಶ್ರೀಮಂತರು ಅಂತಾ ಈ ಊರಲ್ಲಿರೋ 85 ಮನೆಗಳ ಪೈಕಿ ಯಾವ ಮನೆಗಳೂ ಬಿದ್ದೋಗೋ ಸ್ಥಿತಿಯಲ್ಲಿಲ್ಲ. ಆದ್ರೆ ಗ್ರಾಮದ ಮಕ್ಕಳು ಕಲಿಯೋ ಅಂಗನವಾಡಿ ಕೇಂದ್ರದ ಕಟ್ಟಡ ಮಾತ್ರ ಇನ್ನೇನು ಆ ಪಟ್ಟ ಮಕ್ಕಳ ತಲೆ ಮೇಲೆ ಬಿದ್ದೋಯ್ತೇನೋ ಅನ್ನೋ ಸ್ಥಿತಿಯಲ್ಲಿದೆ. ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಇದೀಗ ಗಂಗಮ್ಮ ದೇವಾಲಯಕ್ಕೆ ಶಿಫ್ಟ್ ಆಗಿದೆ. ಗಂಗಮ್ಮನ ದೇವಾಲಯದಲ್ಲೇ ಪಾಠ ಪ್ರವಚನ ಮಾಡುವ ದುಸ್ಥಿತಿ ಶಿಕ್ಷಕಿಯದ್ದಾದ್ರೆ, ಇಲ್ಲೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ಮಕ್ಕಳದ್ದು. ವಿಪರ್ಯಾಸ ಎಂದರೆ ಗ್ರಾಮದಲ್ಲಿ ಪೂಜೆ ಪುನಸ್ಕಾರ ಮಾಡಬೇಕಾದ್ರೆ ಅಂದು ಮಕ್ಕಳಿಗೆ ಅಂಗನವಾಡಿ ಸೂರಿಲ್ಲ. ಅಷ್ಟು ಮಾತ್ರವಲ್ಲದೇ ಅಂಗನವಾಡಿ ಶಿಕ್ಷಕಿಯ ಮುಟ್ಟಿನ ಸಂದರ್ಭದಲ್ಲಿ ಮೂರು ದಿನ ಅಂಗನವಾಡಿಗೆ ರಜೆ.
ವರದನೇಹಳ್ಳಿಯಲ್ಲಿನ ಈ ಅಂಗನವಾಡಿ ಕಟ್ಟಡವನ್ನು ಹದಿನೈದು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದೆ. ಗುತ್ತಿಗೆದಾರನ ದುರಾಸೆಯಿಂದ, ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಮಧ್ಯೆ ಸೆಂಟ್ರಿಂಗ್ ಕಂಬಿಗಳು ಕಿತ್ತು ಬಂದಿದ್ದು, ಗೋಡೆಗಳೂ ಬಿರುಕು ಬಿಟ್ಟಿವೆ. ಅಂಗನವಾಡಿಯ ಕಟ್ಟಡ ಹಾಳು ಬಿದ್ದಿರುವುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗುವುದನ್ನರಿತ ಗ್ರಾಮಸ್ಥರು ಸರಿ ಮಾಡಿಕೊಡಿ ಅಂತಾ ಅಧಿಕಾರಿಗಳನ್ನು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಿಂದ ಕಟ್ಟಡ ರಿಪೇರಿ ಆಗೋವರೆಗೂ ಗಂಗಮ್ಮನ ದೇವಸ್ಥಾನದಲ್ಲಿ ಮಕ್ಕಳಿಗೆ ಕಲಿಸಲು ಅವಕಾಶ ಮಾಡಲಾಗಿದೆ. ಅಡುಗೆ ಮಾತ್ರ ಅದೇ ಹಾಳು ಬಿದ್ದಿರೋ ಕಟ್ಟಡದಲ್ಲಿ ಮಾಡ್ಕೊಳ್ಳಿ ಅಂತಾ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಆದ್ರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರು ಇದೀಗ ಹಿಂದು-ಮುಂದು ನೋಡುತ್ತಾ ಇದ್ದಾರೆ.
ಒಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಆಗ್ತಿರೋ ತೊಂದರೆಯನ್ನು ಪರಿಹರಿಸಲು ಕೋಲಾರ ಜಿಲ್ಲಾಡಳಿತ ತುರ್ತು ಕ್ರಮವನ್ನು ಜರುಗಿಸಬೇಕಾಗಿದೆ. ಭವ್ಯ ಭಾರತವನ್ನ ಕಟ್ಟುವ ಮಕ್ಕಳ ಭವಿಷ್ಯವು ಇಲ್ಲಿನ ಹಾಳು ಬಿದ್ದ ಕಟ್ಟಡಗಳಲ್ಲಿ ತಯಾರಾಗ್ತಾ ಇರೋ ದುಃಸ್ಥಿತಿ ಒದಗಿ ಬಂದಿರೋದು ವಿಪರ್ಯಾಸ.
https://www.youtube.com/watch?v=Eb9ghgQWVVM