ದಾವಣಗೆರೆ: ಹಸುಗಳನ್ನು ಮೇಯಿಸುತ್ತಾ, ತಂದೆ ತಾಯಿಗೆ ಆಸರೆಯಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಮುರಕಲು ಮನೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೆ ಮುಂದೆ ವೈದ್ಯನಾಗಬೇಕೆಂಬ ಕನಸು. ಆದರೆ ಈ ಕನಸು ನನಸಾಗಲು ಆರ್ಥಿಕ ಸಹಾಯ ಬೇಕಿದೆ.
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ದಾವಣಗೆರೆ ಜಿಲ್ಲೆಯ ಐಗೂರು ಗ್ರಾಮದ ಬಸವರಾಜ್ ರಾಜ್ಯಕ್ಕೆ 8ನೇ ಸ್ಥಾನಪಡೆದಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೇ ನೀಟ್ ಪರೀಕ್ಷೆಯಲ್ಲಿ 863 ನೇ ಶ್ರೇಯಾಂಕ ಪಡೆದು ಮೈಸೂರಿನ ಮೆಡಿಕಲ್ ಕಾಲೇಜ್ ನಲ್ಲಿ ಎಂಬಿಬಿಎಸ್ ಸೀಟ್ ಕೂಡ ಪಡೆದಿದ್ದಾರೆ. ಆದ್ರೆ ಮನೆಯಲ್ಲಿ ಕಡು ಬಡತನವಿರುವುದರಿಂದ ಮುಂದಿನ ವಿದ್ಯಾಭ್ಯಾಸ ಹಾಗೂ ವೈದ್ಯನಾಗುವ ಕನಸು ಎಲ್ಲಿ ನುಚ್ಚು ನೂರಾಗುತ್ತದೂ ಎಂಬ ದುಗುಡ ಇದೀಗ ಈ ಪ್ರತಿಭಾವಂತನಿಗೆ ಹುಟ್ಟಿಕೊಂಡಿದೆ.
ಬಸವರಾಜ್ನ ತಂದೆ-ತಾಯಿಗಳು ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಒಂದು ಹೊತ್ತಿನ ಉಟಕ್ಕೂ ಪರದಾಡುವ ಸ್ಥಿತಿಯಿದ್ದರೂ ಹಾಗೂ ಹೀಗೂ ಮಾಡಿ ಮಗನನ್ನು ಇಲ್ಲಿಯವರೆಗೂ ಓದಿಸಿದ್ದಾರೆ. ಈಗ ಮಗ ಬಸವರಾಜ್ ಓದಿ ಮೆಡಿಕಲ್ ಸೀಟ್ ತೆಗೆದುಕೊಂಡಿದ್ದಾರೆ. ಆದ್ರೆ ಮುಂದಿನ ದಾರಿ ಕಾಣದೆ ಪೋಷಕರು ಸದ್ಯ ಬೆಳಕುವಿನ ಕದ ತಟ್ಟಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮಕ್ಕೆ ಹೆಸರನ್ನು ತಂದ ಬಸವರಾಜ್ ಓದಿ ಡಾಕ್ಟರ್ ಆದ್ರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಅಂತ ಗ್ರಾಮಸ್ಥರು ಕೂಡ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕಿತ್ತು ತಿನ್ನುವ ಬಡತನವಿದ್ರೂ ಓದಿನಲ್ಲಿ ಮಾತ್ರ ಬಸವರಾಜ್ ಆಗರ್ಭ ಶ್ರೀಮಂತ. ಎಂಬಿಬಿಎಸ್ ಓದಿ ಜಿಲ್ಲೆಗೆ ಹಾಗೂ ತಂದೆ-ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದು ಕಷ್ಟಪಟ್ಟು ಓದುತ್ತಿರುವ ಇವರು, ಕಾಲೇಜು ಶುಲ್ಕ ಕಟ್ಟಲು ಪರದಾಡುವ ಸ್ಥಿತಿ ಬಂದಿದೆ. ಈ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಆಸರೆಯ ಕೈಗಳು ಬೇಕಾಗಿವೆ.