ಗದಗ: ಮಗ ಮಾನಸಿಕ ಅಸ್ವಸ್ಥ, ಮಗನ ಚಿಂತೆಯಲ್ಲಿ ತಾಯಿ ಖಿನ್ನತೆಗೊಳಗಾಗಿದ್ದು, ಜೀವನ ನಿರ್ವಹಣೆಗಾಗಿ ಮಗಳು ದೇವದಾಸಿಯಾಗಿದ್ದರು. ಈಗ ಕೊನೆಗೂ ಸುಮಾರು 16 ವರ್ಷಗಳಿಂದ ಕುಟುಂಬ ಅನುಭವಿಸುತ್ತಿದ್ದ ನರಕಯಾತನೆಯಿಂದ ಮುಕ್ತಿ ಪಡೆದಿದೆ. ಈಗ ಕುಟುಂಬದಲ್ಲಿ ಹೊಸ ಬೆಳಕು ಮೂಡಿದೆ.
ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಶರಣಪ್ಪ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಅಂದಿನಿಂದಲೂ ಮಾನಸಿಕ ಅಸ್ವಸ್ಥರಾಗಿ ಬಿಟ್ಟಿದ್ದರು. ಇವರ ಕಾಟ ತಾಳಲಾರದೆ ತಂದೆ ಸಿದ್ದಪ್ಪ ಅವರ ಕೈಕಾಲುಗಳಿಗೆ ಬೇಡಿ ತೊಡಿಸಿ 16 ವರ್ಷ ಗೃಹ ಬಂಧನದಲ್ಲಿಟ್ಟಿದ್ದರು. ಮಗನ ಸ್ಥಿತಿಯನ್ನು ಕಂಡು ಚಿಂತೆಯಲ್ಲಿ ತಾಯಿ ಸಹ ಖಿನ್ನತೆಗೆ ಒಳಗಾಗಿದ್ದರು.
ಅಕ್ಟೋಬರ್ 27 ರಂದು ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಮಾಡಿತ್ತು. ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಶರಣಪ್ಪ ಅವರ ಮನೆಗೆ ಹೋಗಿ ಅವರಿಗೆ ಹಾಕಿದ್ದ ಬೇಡಿಯನ್ನು ತೆಗೆದು ನೊಂದ ಕುಟುಂಬದ ಅಳಲನ್ನು ಕೇಳಿ ಧೈರ್ಯ ಹೇಳಿ ಬಂದಿದ್ದಾರೆ.
ಶರಣಪ್ಪರನ್ನು ನಾವು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದ್ದೇವೆ. ಅಲ್ಲದೇ ದೇವದಾಸಿಯಾಗಿದ್ದ ಶರಣಪ್ಪ ಸಹೋದರಿಗೆ ಮನೆ ಮತ್ತು ಮಾಸಾಶನ ನೀಡುವ ಭರವಸೆ ನೀಡಿದ್ದೇವೆ. ಜೊತೆಗೆ ಪಬ್ಲಿಕ್ ಟಿವಿ ಈ ಕಾರ್ಯವನ್ನು ಶ್ಲಾಘಿಸಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಪಾಂಡುರಂಗ ಕಬಾಡಿ ಅವರು ತಿಳಿಸಿದರು.
ಒಟ್ಟಿನಲ್ಲಿ 16 ವರ್ಷಗಳಿಂದ ನರಕಯಾತನೆ ಅನುಭವಿಸಿದ ಕುಟುಂಬದಲ್ಲಿ ಈಗ ಹೊಸ ಬೆಳಕು ಮೂಡಿದ್ದು, ಶರಣಪ್ಪ ಅವರು ಬೇಗನೇ ಗುಣಮುಖರಾಗಲಿ ಅನ್ನೋದು ನಮ್ಮ ಆಶಯವಾಗಿದೆ.