ಬೀದರ್: ಅಂತು ಇಂತು ಬೀದರ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ನರಕಯಾತನೆಯಿಂದ ಮುಕ್ತಿ ಸಿಕ್ಕಿದೆ. ಶಾಲೆಯ ವಿದ್ಯಾರ್ಥಿನಿಯರು ಶೌಚಾಲಯ ಇಲ್ಲದೆ ನಕತಯಾತನೆ ಪಡುತ್ತಿರುವ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಪಬ್ಲಿಕ್ ಟಿವಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಣು ತೆರಿಸಿತ್ತು. ಇದಕ್ಕೆ ಅಧಿಕಾರಿಗಳು ಕೂಡಲೇ ಸ್ಪಂದನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು ಆರು ಶೌಚಾಲಯ ನಿರ್ಮಾಣ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ನಿಮ್ಮ ಪಬ್ಲಿಕ್ ಟಿವಿಯ ಬಿಗ್ ಇಂಪ್ಯಾಕ್ಟ್.
ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 160ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಜಯ ಸಿಕ್ಕಿದೆ. ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 190 ವಿದ್ಯಾರ್ಥಿಗಳು ಇದ್ದು ಶೇಕಡ 80 ರಷ್ಟು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಶೌಚ ಮಾಡಲು ಶೌಚಾಲಯವಿಲ್ಲದೆ ಬಯಲಲ್ಲಿ ಶೌಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಾಚಿಕೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಹಂತಕ್ಕೆ ಬಂದಿದ್ದರು.
ವಿದ್ಯಾರ್ಥಿನಿಯರು ಶೌಚಾಲಯವಿಲ್ಲದೆ ನರಕಯಾತನೆ ಪಡುತ್ತಿರುವ ಸುದ್ದಿಯನ್ನು ನಿಮ್ಮ ಪಬ್ಲಿಕ್ ಟಿವಿ `ಬೆಳಕು’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚರಗೊಂಡ ಅಧಿಕಾರಿಗಳು 14ನೇ ಹಣಕಾಸು ಯೋಜನೆ ಅಡಿಯಲ್ಲಿ 1 ಲಕ್ಷ ರೂ. ವೆಚ್ಚ ಮಾಡಿ ಒಟ್ಟು ಆರು ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯವಿಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದ್ದು ಸುದ್ದಿ ಪ್ರಸಾರವಾದ ನಂತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸಿದ್ರಲ್ಲಾ ಎಂಬ ಸಮಾಧಾನವಿದೆ. ಬಾಲಕಿಯರಿಗೆ ಅಷ್ಟೆ ಅಲ್ಲದೆ ಬಾಲಕರಿಗೂ ಶೌಚಾಲಯ ನಿಮಾರ್ಣ ಮಾಡಲು ಸ್ವತಃ ಶಾಲೆಯ ಶಿಕ್ಷಕರು ಪಣತೊಟ್ಟಿದ್ದು ಖುಷಿಯ ಸಂಗತಿಯಾಗಿದೆ.
ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಬಾಲಕಿಯರ ನರಕಯಾತನೆ ಬಗ್ಗೆ ಸುದ್ದಿ ಮಾಡಿದ್ದಕ್ಕೆ ಇಂದು ಬಾಲಕಿಯರಿಗೆ ಬೆಳಕು ಸಿಕ್ಕಿದ್ದು ಸಂತೋಷದ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತ್ತ ಒಂದು ಸ್ಟೋರಿಗೆ ಮಾನವೀಯತೆಯ ಬೆಲೆ ನಮ್ಮಿಂದ ಸಿಕ್ಕಿದೆ ಎಂಬ ಖುಷಿ ನಿಮ್ಮ ಪಬ್ಲಿಕ್ ಟಿವಿಗೆ ಇದೆ. ಸ್ಪಂದನೆ ನೀಡಿದ ಜನಪತ್ರಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ವಿದ್ಯಾರ್ಥಿನಿಯರ ಪರವಾಗಿ ಧನ್ಯವಾದಗಳು.