ಉಡುಪಿ: ಭೂಮಿಯ ಮೇಲೆ ಹುಟ್ಟಿದ ಮೇಲೆ ಯಾರೂ ಅನಾಥರಿಲ್ಲ. ರಕ್ತ ಸಂಬಂಧಗಳು ಕಡಿದುಹೋದರೂ ಮಾನವ ಸಂಬಂಧಗಳು ಇರಲೇಬೇಕು. ಏನಿದು ಫಿಲಾಸಫಿ ಹೇಳುತ್ತಿದ್ದೀರಿ ಅಂತ ಅಂದ್ಕೊಳ್ತಿದ್ದೀರಾ? ಇದು ಇವತ್ತಿನ ಪಬ್ಲಿಕ್ ಹೀರೋ ವಿಶು ಶೆಟ್ಟಿಯವರ ಫಿಲಾಸಫಿ. ಸಂಬಂಧಿಕರೇ ಸಿಗದ 50ಕ್ಕೂ ಹೆಚ್ಚು ಮಂದಿಯ ಅಂತ್ಯಸಂಸ್ಕಾರ ಮಾಡಿದ ಪಬ್ಲಿಕ್ ಹೀರೋ ಕಥೆ ಇದು.
ಗಟ್ಟಿ ಲೋಹ ಕಬ್ಬಿಣದ ಕೆಲಸ ಮಾಡುತ್ತಿರುವ ಈ ಮೃದು ಹೃದಯಿ ವಿಶು ಕುಮಾರ್ ಶೆಟ್ಟಿ. ತಮ್ಮ ವಿಭಿನ್ನ ಸೇವೆಗಳಿಂದಲೇ ವಿಶು ಶೆಟ್ರು ಅಂತಾನೇ ಉಡುಪಿಯಲ್ಲಿ ಫೇಮಸ್. ಎಲ್ಲೇ ಅಪಘಾತಗಳು ಸಂಭವಿಸಲಿ ಮೊದಲಿಗೆ ವಿಶು ಶೆಟ್ಟಿ ಅವರಿಗೆ ಕಾಲ್ ಬರುತ್ತೆ. ಎಷ್ಟೇ ಬ್ಯುಸಿಯಿದ್ರೂ ಧಾವಿಸಿ ಬರ್ತಾರೆ. ಅಪಘಾತಕ್ಕೆ ತುತ್ತಾದವರನ್ನ ತಾವೇ ಆಸ್ಪತ್ರೆಗೆ ದಾಖಲಿಸಿ, ಮನೆಯವರು ಬರೋತನಕ ನೋಡಿಕೊಳ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ಅಥವಾ ಅನಾಥರಾಗಿ ಸಾವನ್ನಪ್ಪಿದ್ರೆ ವಾರುಸುದಾರರಿಗಾಗಿ ಕಾದು, ಬರದೆ ಹೋದಲ್ಲಿ ತಾವೇ ಅಂತ್ಯ ಸಂಸ್ಕಾರ ಮಾಡ್ತಾರೆ. ಈವರೆಗೆ 50ಕ್ಕೂ ಹೆಚ್ಚು ಅಪರಿಚಿತ ಶವಗಳ ಅಂತ್ಯಕ್ರಿಯೆ ಮಾಡಿದ್ದಾರೆ.
ಮನೆಯಲ್ಲಿ ನೋಡಿಕೊಳ್ಳಲಾಗದೆ ಬಿಟ್ಟು ಹೋದ ಹಿರಿಯ ವಯಸ್ಸಿನವರಿಗೆ ಇವರೇ ಆತ್ಮೀಯರು. ಆರೋಗ್ಯ ವಿಚಾರಿಸಿ ನೊಂದ ಮನಸ್ಸುಗಳನ್ನ ಸಂತೈಸ್ತಾರೆ. ಇಷ್ಟೇ ಅಲ್ಲ, ಮೂಕಪ್ರಾಣಿಗಳಿಗೂ ಸಹಾಯ ಮಾಡ್ತಾರೆ. ಚಿಕಿತ್ಸೆಯ ವೆಚ್ಚ ಕೊಡಲಾಗದವರ ಪರವಾಗಿ ಹಣ ಸಂಗ್ರಹಿಸಿ ಆ ಕುಟುಂಬಕ್ಕೆ ಕೊಡುವುದು, ಬಡತನದಿಂದ ಶಿಕ್ಷಣ ಸ್ಥಗಿತಗೊಳಿಸಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸೋ ಕೆಲಸ ಮಾಡ್ತಿದ್ದಾರೆ.