ಕೋಲಾರ: ಮನೆಯ ಮೇಲೆ ತಂದೆಯ ಪ್ರತಿಮೆ ಜೊತೆಗೆ ತೆಲುಗು ನಟ ಎನ್ಟಿಆರ್ ಮೂರ್ತಿಯನ್ನೂ ನಿರ್ಮಿಸಿರೋ ಕೋಲಾರ ತಾಲೂಕಿನ ಸೀಪೂರು ನಿವಾಸಿ ನಾರಾಯಣಪ್ಪ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.
ನಾರಾಯಣಪ್ಪ ಕುರಿಗಾಹಿ ಕೆಲಸ ಮಾಡುತ್ತಾರೆ. ಅವರಿಗೆ ತಂದೆ-ತಾಯಿ ಎಂದರೆ ತುಂಬಾ ಪ್ರೀತಿ. ತಂದೆ ಬೆಂಗಳೂರು ಮುನಿಯಪ್ಪ, ತಾಯಿ ಅಕ್ಕಮ್ಮ. ಇವರ ಪೋಷಕರು ಬೆಂಗಳೂರಿನಿಂದ ಬಂದು ಸೀಪೂರದಲ್ಲಿ ನೆಲೆಸಿದ್ದು, ಕಡುಬಡತನದಲ್ಲೂ ಸಾಕಿ ಸಲಹಿದ ಪರಿಯನ್ನ ಈಗಲೂ ನೆನಸಿಕೊಳ್ಳುತ್ತಾರೆ. ಹಾಗಾಗಿ ಮನೆಯಲ್ಲೇ ಪೋಷಕರ ಸಮಾಧಿ ನಿರ್ಮಿಸಿದ್ದಾರೆ.
ತಂದೆಯ ಜೊತೆಗೆ ತನ್ನ ನೆಚ್ಚಿನ ನಟರಾದ ತೆಲುಗಿನ ಎನ್ಟಿಆರ್ ಚಿತ್ರಗಳಲ್ಲಿನ ಆದರ್ಶ ಪಾಲಿಸುತ್ತಿದ್ದಾರೆ. ಆದ್ದರಿಂದ ತಂದೆ ಬೆಂಗಳೂರು ಮುನಿಯಪ್ಪ ಹಾಗೂ ಎನ್ಟಿಆರ್ ಪ್ರತಿಮೆಯನ್ನ ಮನೆ ಮೇಲೆ ನಿರ್ಮಿಸಿಕೊಂಡಿದ್ದಾರೆ.
ಪ್ರತಿದಿನ ಬೆಳಗ್ಗೆ ಈ ಪ್ರತಿಮೆಗಳನ್ನ ಶುಚಿಗೊಳಿಸಿದ ಬಳಿಕವೇ ಇವರ ದಿನಚರಿ ಆರಂಭವಾಗುವುದು ಎಂದು ನಾರಾಯಣಪ್ಪ ಪುತ್ರ ಕೃಷ್ಣಾರೆಡ್ಡಿ ಹೇಳಿದ್ದಾರೆ. ನಾರಾಯಣಪ್ಪ ಅವರು ಅನಕ್ಷರಸ್ಥರಾದರೂ ಹೆತ್ತವರ ಮೇಲಿನ ಪ್ರೀತಿ ಮತ್ತು ಎನ್ಟಿಆರ್ ಅಭಿಮಾನ ಅವರ ಮನೆ-ಮನದಲ್ಲಿ ಸದಾ ತುಂಬಿದೆ.
https://www.youtube.com/watch?v=bRw3dWzLJnE