ವಿಜಯಪುರ: ಸರ್ಕಾರಿ ಶಾಲೆ ಅಂದ್ರೆ ಹೀಗಿರ್ಬೇಕಪ್ಪಾ ಎನ್ನುವಂತಿದೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡದ ಈ ಶಾಲೆಯಲ್ಲಿ ಏನಿಲ್ಲ ಅಂತ ಹುಡುಕಬೇಕು. ಅಷ್ಟರ ಮಟ್ಟಿಗೆ ಈ ಶಾಲೆ ಎಲ್ಲಾ ವಿಧವಾದ ಸೌಲಭ್ಯಗಳನ್ನು ಪಡೆದಿದೆ.
ಮುಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಸಿಗೆಯಲ್ಲೂ ಹಸಿರ ಹೊದಿಕೆ ಹೊದ್ದಿದೆ. ಇಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಹೈಟೆಕ್ ಶಿಕ್ಷಣ ಕೊಡಲಾಗ್ತಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆಯೂ ಈ ಶಾಲೆಯಲ್ಲಿದೆ.
ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 112 ವಿವಿಧ ಗಿಡಗಳನ್ನು ಬೆಳಯಲಾಗಿದೆ. ಅಲ್ಲದೆ ಚಿಕ್ಕತೋಟದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಸೊಪ್ಪು ತರಕಾರಿ ಬೆಳೆಯಲಾಗಿದೆ. ಜೊತೆಗೆ ಹೂವನ್ನೂ ಬೆಳೆಯಲಾಗಿದೆ. ಇದ್ರಿಂದ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಆರೋಗ್ಯ ವರ್ಧಿಸೋ ವಾತಾವರಣ ನಿರ್ಮಾಣವಾಗಿದೆ.
ಇದೆಲ್ಲದಕ್ಕೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಕಾರಣ ಅಂತ ವಿದ್ಯಾರ್ಥಿಗಳು ಹೇಳುತ್ತಾರೆ.