ಬೆಂಗಳೂರು: ಕೆಲ ಬಡ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರೋದು ಹಾಗೂ ವಾಪಾಸ್ ಕರೆದುಕೊಂಡು ಹೋಗೋದೇ ದೊಡ್ಡ ಸಮಸ್ಯೆ. ಕಾರಣ ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಾಗಿರುತ್ತದೆ. ಇಂತಹ ಬಡವರ ಮಕ್ಕಳನ್ನು ತಾವೇ ಪೋಷಕರಂತೆ ಶಾಲೆಗೆ ಕೆರೆದುಕೊಂಡು ಬಂದು ಪುನಃ ವಾಪಸ್ ಕರೆದುಕೊಂಡು ಬಿಡುತ್ತಾರೆ. ನೆಲಮಂಗಲದ ಅಪರೂಪದ ಮೇಷ್ಟ್ರು ನಮ್ಮ ಇವತ್ತಿನ ಪಬ್ಲಿಕ್ ಹೀರೋ.
ಮೂಲತಃ ಮಾಗಡಿ ತಾಲೂಕಿನ ಬಿಟ್ಟಸಂದ್ರ ಗ್ರಾಮದ ಮರುಳ ಸಿದ್ದಯ್ಯ ಅವರು ಕಳೆದ 19 ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 5 ವರ್ಷಗಳಿಂದ ನೆಲಮಂಗಲ ತಾಲೂಕಿನ ಪಾಪಬೋವಿಪಾಳ್ಯದ ಶಾಲೆಯಲ್ಲಿ ಮರುಳ ಸಿದ್ದಯ್ಯ ಕೆಲಸ ಮಾಡಿಕೊಂಡಿದ್ದಾರೆ.
ತಮ್ಮ ಶಾಲೆಗೆ ಬರೋ ಬಡವರ ಮಕ್ಕಳನ್ನು ಇವರೇ ತಮ್ಮ ಬೈಕ್ ಅಥವಾ ಕಾರಿನಲ್ಲಿ ಕರೆದುಕೊಂಡು ಬರುತ್ತಾರೆ. ಸಂಜೆ ಶಾಲೆ ಮುಗಿದ ಬಳಿಕ ಮತ್ತೆ ತಾವೇ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ.
ಕಲ್ಲುಕ್ವಾರಿ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳನ್ನೆಲ್ಲಾ ಮರಳಿ ಶಾಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸಂಬಳದಲ್ಲಿಯೇ ಬಡಮಕ್ಕಳಿಗೆ ಶೇ.25 ರಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರ ಸೇವೆಗೆ ಕುಟುಂಬ ಕೂಡಾ ಸಾಥ್ ನೀಡಿದೆ.