ಹಾವೇರಿ: ಸರ್ಕಾರಿ ಶಾಲೆ ಅಂದ್ರೆ ಮೂಗುಮರಿಯೋ ಜನರೇ ಹೆಚ್ಚು. ಆದ್ರೆ ಇಂಥ ಮಾತನ್ನ ಸುಳ್ಳು ಮಾಡಿರೋ ಹಲವು ಶಾಲೆಗಳು, ಶಿಕ್ಷಕರ ಬಗ್ಗೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ತೋರಿಸಿದ್ದೀವಿ. ಇವತ್ತು ಅಂಥದ್ದೇ ಸ್ಟೋರಿ. ಮಕ್ಕಳನ್ನ ಸೆಳೆಯೋಕೆ, ಅವರಲ್ಲಿ ಹೆಚ್ಚಿನ ಜ್ಞಾನ ತುಂಬೋಕೆ ಹಾವೇರಿಯ ರಾಣೇಬೆನ್ನೂರಿನ ಅರೇಮಲ್ಲಾಪುರ ಗ್ರಾಮದ ಶಿಕ್ಷಕ ಕಾರ್ಯ ಶ್ಲಾಘನೀಯ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೇಮಲ್ಲಾಪುರ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ರೀತಿ ನಿರ್ಮಾಣಗೊಂಡಿರುವ ಸುಂದರ ಕಲಾಕೃತಿಗಳು ಮತ್ತು ಅದನ್ನ ತೋರಿಸಿ ಪಾಠ ಮಾಡುತ್ತಿರುವ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ
1904ರಲ್ಲಿ ಪ್ರಾರಂಭವಾದ ಶಾಲೆ ಶತಮಾನೋತ್ಸ ಕಂಡಿದೆ. ಆದ್ರೆ ಎಲ್ಲಾ ಶಾಲೆಗಳಂತಿದ್ದ ಈ ಶಾಲೆಗೆ ನಾಲ್ಕು ವರ್ಷದಿಂದ ಶಿಕ್ಷಕ ಕೃಷ್ಣಪ್ಪ ದುರ್ಗದ ಅವರ ವಿಶೇಷ ಆಸಕ್ತಿಯಿಂದ ಹೊಸರೂಪ ಬಂದಿದೆ. ಶಾಲೆಯ ಆವರಣದಲ್ಲಿ ಹೋರಾಟಗಾರರು, ದಾರ್ಶನಿಕರು, ಸಾಹಿತಿಗಳು, ಮಹಾನ್ ವ್ಯಕ್ತಿಗಳ ಕಲಾಕೃತಿಯನ್ನ ಸಿಮೆಂಟ್ನಲ್ಲಿ ನಿರ್ಮಿಸಿದ್ದಾರೆ.
ಅರೇಮಲ್ಲಾಪುರ ಶಾಲೆಯಲ್ಲಿ ಮೊದಲಿಗೆ ಮಕ್ಕಳ ಕೊರತೆ ಇತ್ತು. ಆದ್ರೆ ಶಾಲೆಗೆ ಹೊಸ ಮೆರುಗು ನೀಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇರೋದ್ರಿಂದ ಈಗ 400ಕ್ಕೆ ಏರಿದೆ. ಶಿಕ್ಷಕ ಕೃಷ್ಣಪ್ಪ ಕಾರ್ಯದ ಬಗ್ಗೆ ಗ್ರಾಮಸ್ಥರು ಕೊಂಡಾಡುತ್ತಾರೆ.
ಇದಕ್ಕಾಗಿ ಶಿಕ್ಷಕ ಕೃಷ್ಣಪ್ಪ ಮೊದಲಿಗೆ ತಾವೇ ಖರ್ಚು ಮಾಡಿದ್ದು, ನಂತರ ಗ್ರಾಮದ ದಾನಿಗಳಿಂದ ನೆರವು ಸಿಕ್ಕಿದೆ. ಕೃಷ್ಣಪ್ಪ ಅವರ ಕಾರ್ಯಕ್ಕೆ ಶಾಲೆಯ ಶಿಕ್ಷಕ ವೃಂದ ಕೂಡ ಸಾಥ್ ನೀಡಿದೆ.