ಚಿತ್ರದುರ್ಗ: ಬೇಸಿಗೆ ಶುರುವಾಗಿದ್ದು ಈಗಲೇ ನೀರಿಗೆ ಹಲವು ಕಡೆ ಬರ ಬಂದಿದ್ದು ಪ್ರಾಣಿ ಪಕ್ಷಿಗಳು ನೀರು ಸಿಗದೇ ಒದ್ದಾಡುತ್ತಿವೆ. ಅದರಲ್ಲೂ, ಅವಸಾನದ ಅಂಚಿನಲ್ಲಿರೋ ಗುಬ್ಬಚ್ಚಿಗಳ ಕಥೆ ಹೇಳೋಕೆ ಆಗಲ್ಲ. ಆದ್ರೆ, ಚಿತ್ರದುರ್ಗದ ಕಾರ್ತಿಕ್ ಅನ್ನೋವರು ಮಾತ್ರ ವಿಭಿನ್ನ ಪ್ರಯತ್ನದ ಮೂಲಕ ಗುಬ್ಬಚ್ಚಿ ರಕ್ಷಣೆಗೆ ಪಣತೊಟ್ಟಿದ್ದಾರೆ.
ಬೇಸಿಗೆಗೆ ಮುನ್ನವೇ ಚಿತ್ರದುರ್ಗದಲ್ಲಿ ಬರ ಎದುರಾಗಿದೆ. ಮೂರ್ನಾಲ್ಕು ವರ್ಷದಿಂದ ಬರಕ್ಕೆ ಬಸವಳಿದು ಹೋಗಿದ್ದ ಚಿತ್ರದುರ್ಗದಲ್ಲಿ ಈ ವರ್ಷ ಕೊಂಚ ಮಳೆಯಾಗಿತ್ತು. ಆದರೆ ಮಾರ್ಚ್ಗೆ ಮುನ್ನವೇ ಬೇಸಿಗೆಯನ್ನೂ ಮೀರಿಸೋ ಬಿಸಿಲು ಕಾಣ್ತಿದೆ. ಹೀಗಾಗಿ, ಚಿತ್ರದುರ್ಗದ ಮರಗಿಡಗಳು ಬೋಳಾಗಿವೆ.
ಇದರಿಂದಾಗಿ, ಪ್ರಾಣಿ-ಪಕ್ಷಿಗಳಿಗೆ ತಿನ್ನಲು ಆಹಾರ ಹಾಗೂ ಕುಡಿಯಲು ನೀರು ಸಹ ಸಿಗಲಾರದೇ ಕಂಗಾಲಾಗ್ತಿವೆ. ಅದರಲ್ಲೂ ಗುಬ್ಬಚ್ಚಿಗಳ ಪಾಡು ದೇವರಿಗೇ ಪ್ರೀತಿ. ಈ ಸನ್ನಿವೇಶನ್ನು ಸೂಕ್ಷ್ಮವಾಗಿ ಗಮನಿಸಿರೋ ವನ್ಯಜೀವಿ ಛಾಯಗ್ರಾಹಕ ಕಾರ್ತಿಕ್, ಗೆಳೆಯರೊಂದಿಗೆ ಸೇರಿ `ಗುಬ್ಬಚ್ಚಿ ಬಡ್ರ್ಸ್’ ಎಂಬ ಟ್ರಸ್ಟ್ ಕಟ್ಟಿ, ಒಂದು ವರ್ಷದಿಂದ ಗುಬ್ಬಚ್ಚಿಗಳ ರಕ್ಷಣೆಗೆ ನಿಂತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸ್ತಿದ್ದಾರೆ.
ಸ್ಟೇಡಿಯಂ ರಸ್ತೆ, ವಿದ್ಯಾನಗರ, ಜೋಗಿಮಟ್ಟಿ ರಸ್ತೆ ಹಾಗೂ ಐಯುಡಿಪಿ ಬಡಾವಣೆಯ 800ಕ್ಕೂ ಹೆಚ್ಚು ಮನೆಗಳ ಮುಂದೆ ಈ ಗುಬ್ಬಚ್ಚಿ ಗೂಡುಗಳನ್ನ ಕಟ್ಟಿದ್ದಾರೆ. ಕಾರ್ತಿಕ್ ಮತ್ತವರ ತಂಡಕ್ಕೆ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೂಕ ಪ್ರಾಣಿ-ಪಕ್ಷಿಗಳ ವೇದನೆಗೆ ಸ್ಪಂದಿಸ್ತಿರೋ ಕಾರ್ತಿಕ್ ಮತ್ತವರ ತಂಡದ ಕಾರ್ಯ ಶ್ಲಾಘನಾರ್ಹವಾದುದು.
https://www.youtube.com/watch?v=6tk0gU4nhqk