ಹಾವೇರಿ: ಹುಟ್ಟುಹಬ್ಬದ ಆಚರಣೆ ಅಂದರೆ ಕೇಕ್ ಕತ್ತರಿಸುವುದು, ಭರ್ಜರಿ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ ಹಾವೇರಿಯ ರಾಣೇಬೆನ್ನೂರಿನ ಆಟೋ ಚಾಲಕರು ತಮ್ಮ ಹುಟ್ಟು ಹಬ್ಬದ ಆಚರಣೆ ವೇಳೆ ಸಸಿ ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರು ನಗರದ ರೈಲು ನಿಲ್ದಾಣದ ಎದುರಿನ ಈ ಗಿಡಗಳನ್ನ ನೆಟ್ಟಿದ್ದು ಇದೇ ಆಟೋ ಚಾಲಕರು. ಆಟೋ ಚಾಲಕರ ಸಂಘ ಕಟ್ಟಿಕೊಂಡಿರೋ 40 ಚಾಲಕರು, ಪ್ರತಿಯೊಬ್ಬರ ಜನ್ಮದಿನದಂದು ಒಂದೊಂದು ಸಸಿ ನೆಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ನಿರಂತರವಾಗಿ ಪೋಷಣೆ ಮಾಡುತ್ತಿದ್ದಾರೆ.
ಪ್ರಮುಖವಾಗಿ ಶೋಭಾಬಲ, ಹುಲಗಿಲ, ರೇನ್ ಟ್ರೀ, ನೇರಳೆ, ಬೇವು ಸೇರಿದಂತೆ ಹಲವು ಸಸಿಗಳನ್ನ ನೆಟ್ಟು ಅವುಗಳನ್ನ ಮರಗಳಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಪ್ರತಿಯೊಂದು ಸಸಿಗೂ ಮಹಾತ್ಮರ ಹೆಸರು ಇಟ್ಟಿದ್ದಾರೆ. ಜೊತೆಗೆ ಇಡೀ ನಗರದ ತುಂಬ ಸಸಿಗಳನ್ನ ನೆಡುವ ಸಂಕಲ್ಪ ಮಾಡಿದ್ದಾರೆ.
ಕಾಡು ಬೆಳೆಸಿ ನಾಡು ಉಳಿಸಿ ಎನ್ನುವ ಸಂದೇಶ ಸಾರುತ್ತಿರುವ ಆಟೋ ಚಾಲಕರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.