ಬಳ್ಳಾರಿ: ಸಾಮಾನ್ಯ ಮಕ್ಕಳಿಗೆ ಶಿಕ್ಷಣ ಕೊಡೋದು ಸುಲಭದ ಕೆಲಸ. ಆದ್ರೆ ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣ ಕೊಡೋದು ಮಾತ್ರ ಕಡುಕಷ್ಟ. ಆದ್ರೆ ಅಂತಹ ಅಸಾಧ್ಯವನ್ನು ತಮ್ಮ ಸ್ವಂತ ದುಡ್ಡಲ್ಲೇ `ಸಾಧ್ಯ’ ಎಂಬ ಶಾಲೆಯ ಮೂಲಕ ಮಾಡಿದ್ದಾರೆ ನಮ್ಮ ಪಬ್ಲಿಕ್ ಹೀರೋ.
ಕೆ.ಟಿ.ಆರತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ವಸತಿಸಹಿತ ಬುದ್ದಿಮಾಂದ್ಯ ಶಾಲೆ ಆರಂಭಿಸಿ 35 ಮಕ್ಕಳಿಗೆ ವಿಶೇಷ ಶಿಕ್ಷಣ ನೀಡುತ್ತಿದ್ದಾರೆ. ಕೊಡಗು ಮೂಲದವರಾದ ಆರತಿ ಅವರು ಮಂಗಳೂರು ವಿವಿಯಲ್ಲಿ ಎಂಎಸ್ಡಬ್ಲೂನಲ್ಲಿ 2ನೇ ಶ್ರೇಯಾಂಕ ಪಡೆದು ಈ ಶಾಲೆಯನ್ನು ಆರಂಭಿಸಿದ್ದಾರೆ.
ಮೊದಲಿನಿಂದಲೂ ಬುದ್ದಿಮಾಂದ್ಯ ಮಕ್ಕಳಿಗಾಗಿ ಏನಾದರೂ ಸಹಾಯ ಮಾಡಬೇಕೆಂಬ ಆಸೆ ಇತ್ತು. ಈ ಹಿಂದೆ ಜಿಂದಾಲ್ ಸಂಸ್ಥೆಯಲ್ಲಿ ಬುದ್ದಿಮಾಂದ್ಯ ಶಾಲೆಯಲ್ಲಿ ಕೆಲಸ ಮಾಡಿದ್ರು. ಗಂಡ ಕೂಡಾ ಇದೇ ಜಿಂದಾಲ್ನಲ್ಲಿ ಕೆಲಸ ಮಾಡ್ತಿದ್ದರು. ಬಳಿಕ ತಾವೇ `ಸಾಧ್ಯ’ ಹೆಸರಿನಲ್ಲಿ ಬುದ್ದಿಮಾಂದ್ಯ ಶಾಲೆ ಆರಂಭಿಸಿ ಸಮಾಜ ಸೇವೆ ಮಾಡ್ತಿದ್ದಾರೆ.
ಪತಿ ಹಾಗೂ ಕುಟುಂಬದವರಿಂದ ಆರತಿಗೆ ಧನ ಸಹಾಯ ಸಿಗುತ್ತದೆ. ಕೇವಲ ಕಟ್ಟಡದ ಬಾಡಿಗೆಗಾಗಿ ಪೋಷಕರಿಂದ ಅಲ್ಪಸ್ವಲ್ಪ ಹಣ ಪಡೆಯುತ್ತಾರೆ. ಬಡ ಪೋಷಕರು ಫೀಜ್ ಕೊಡದಿದ್ರೂ ಆ ಮಕ್ಕಳಿಗೂ ಶಿಕ್ಷಣ ನೀಡ್ತಿದ್ದಾರೆ. ಪ್ರತಿ 7 ಮಕ್ಕಳಿಗೆ ಒಬ್ಬರು ಶಿಕ್ಷಕರು ಮತ್ತು ಆಯಾರನ್ನು ನೇಮಿಸಿಕೊಂಡಿದ್ದಾರೆ. ಶಿಕ್ಷಣದ ಜೊತೆ ಮಕ್ಕಳಿಗೆ ಪೇಪರ್ ಕವರ್ಸ್, ಕ್ಯಾಂಡಲ್ಸ್ ಮಾಡೋದನ್ನ ಕಲಿಸುತ್ತಿದ್ದಾರೆ.
ಆರತಿಯವರಿಗೆ ಸ್ವಂತ ಕಟ್ಟಡವೊಂದನ್ನು ಕಟ್ಟಿ ಅಲ್ಲಿ ಮತ್ತಷ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಆಸೆ ಇದೆ. ಅವರ ಆಸೆ ಈಡೇರಿಸಲು ಒಂದಿಷ್ಟು ಸಹೃದಯಿಗಳು ಕೈ ಜೋಡಿಸಲಿ ಎಂಬುದು ನಮ್ಮ ಆಶಯ.