ಬೆಂಗಳೂರು: ಈಗಿನ ಪರಿಸ್ಥಿತಿಯಲ್ಲಿ ಕೃಷಿ ಅಂದ್ರೆ ಕಷ್ಟ ಕಣ್ರಿ ಅನ್ನೋವ್ರೇ ಜಾಸ್ತಿ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಿನಿಮಾ ನಟರಾದ್ರೂ ಕೃಷಿಯಲ್ಲಿ ಖುಷಿಯ ಬದುಕು ಕಂಡುಕೊಂಡಿದ್ದಾರೆ. ನಟ ವಿನೋದ್ ರಾಜ್ ತಾಯಿ ಲೀಲಾವತಿಯವರ ಮಾರ್ಗದರ್ಶನದಂತೆ ಬಿರು ಬೇಸಿಗೆಯಲ್ಲೂ ಉತ್ತಮ ಇಳುವರಿಯ ಬೆಳೆ ತೆಗೆದಿದ್ದಾರೆ.
ದಶಕದ ಹಿಂದೆ ವಿವಿಧ ಪಾತ್ರಗಳೊಂದಿಗೆ ರಾಜ್ಯದ ಜನತೆಯ ಮೆಚ್ಚುಗೆ ಪಡೆದವರು ನಟ ವಿನೋದ್ ರಾಜ್. ಹೃದಯ ಸಂಬಂಧಿ ಕಾಯಿಲೆಯಿಂದ ಚಿತ್ರರಂಗದಿಂದ ದೂರ ಉಳಿದಿದ್ರು. ಆದ್ರೀಗ ತಾಯಿ ಲೀಲಾವತಿ ಜೊತೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನೆಲೆಸಿದ್ದು ಕೃಷಿಕರಾಗಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದಿದ್ದಾರೆ.
ಹನಿ ನೀರಾವರಿ ಬಳಸಿ ಬಿರುಬೇಸಿಗೆಯಲ್ಲೂ ಸೊಂಪಾದ ಬೆಳೆ ತೆಗೀತಿದ್ದಾರೆ. ಭೂಮಿ ಹದ, ಬೆಳೆಗಳಿಗೆ ಪಾತಿ, ಕಳೆ ತೆಗೆದು ತರಹೇವಾರಿ ದೇಶೀ ಮತ್ತು ವಿದೇಶಿ ತಳಿಯ ಹೂ-ಹಣ್ಣು ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ತಾವೇ ನೆಲಮಂಗಲದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಬರ್ತಾರೆ.
ಒಟ್ಟಿನಲ್ಲಿ ಬಣ್ಣದ ಲೋಕದ ವ್ಯಾಮೋಹಕ್ಕೆ ಸಿಲುಕದೆ ಕೃಷಿಕರಾಗಿ ತಾಯಿಗೆ ತಕ್ಕ ಮಗನಾಗಿರೋ ವಿನೋದ್ ರಾಜ್ಯದ ರೈತರಿಗೆ ಮಾದರಿಯಾಗಿದ್ದಾರೆ.