ಬಾಗಲಕೋಟೆ: ಸ್ಕೂಲ್ಗೆ ಬಂದು ಪಾಠ ಮಾಡಿದ ಮೇಲೆ ನಮಗ್ಯಾಕಪ್ಪಾ ಬೇರೆ ವಿಷಯ ಅನ್ನೋ ಶಿಕ್ಷಕರಿಗೆಲ್ಲ ಮಾದರಿಯಾಗುವ ಶಿಕ್ಷಕ ದಂಪತಿ ಬಾಗಲಕೋಟೆಯಲ್ಲಿದಾರೆ.ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಂಪತಿ ಎ.ಎಫ್ ಹೂಲಿ ಹಾಗೂ ದೀಪಾ ಮಳಲಿ ನಮ್ಮ ಪಬ್ಲಿಕ್ ಹೀರೋಗಳು.
ಸತತ ಆರು ವರ್ಷಗಳಿಂದ ಹೂಲಿ ದಂಪತಿ ತಮ್ಮ ಸಂಬಳದ ಅರ್ಧ ಭಾಗವನ್ನು ಶಾಲೆಯ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ. ಶಾಲೆಯಲ್ಲಿ ಹಸಿರು ಕಾಣುವಂತೆ ಮಾಡಿದ್ದಾರೆ. ಇನ್ನು ಶಾಲೆಯ ಆವರಣದಲ್ಲಿ ಸರ್ವಧರ್ಮ ಸಮಾನತೆ ಸಾರುವ ಭವನವಿದೆ. ಈ ಭವನದಲ್ಲಿ ಅಲ್ಲಾ, ರಾಮ್, ರಹೀಮ್ ಎಲ್ಲರೂ ಇದ್ದಾರೆ. ಇಲ್ಲಿನ ಮಕ್ಕಳು ಅಷ್ಟೇ ಪ್ರೀತಿ, ಸಹಬಾಳ್ವೆಯಿಂದ ಪಾಠ ಕಲಿಯುತ್ತಿದ್ದಾರೆ ಮತ್ತು ಆಟವಾಡಿ ನಲಿಯುತ್ತಾರೆ.
ಹೂಲಿ ದಂಪತಿ ಬಂದ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಓದಿನ ಜೊತೆ ಮಕ್ಕಳಿಗೆ ಸಾಮನ್ಯ ಜ್ಞಾನ, ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಕಲಿಕೆ, ನೀತಿ ಬೋಧನೆ, ಸರ್ವಧರ್ಮ ಸಮನ್ವಯತೆ ಹೀಗೆ ಎಲ್ಲದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಎಲ್ಲರೂ ಸಂಬಳಕ್ಕಾಗಿ ಕೆಲಸ ಮಾಡಿದರೆ ಈ ಶಿಕ್ಷಕ ದಂಪತಿಯ ನಿಸ್ವಾರ್ಥ ಸೇವೆಗೆ ಅಭಿನಂದನೆಯನ್ನು ಸಲ್ಲಿಸಬೇಕು.