ಚಿಕ್ಕಬಳ್ಳಾಪುರ: ಕರ್ತವ್ಯ ಲೋಪ ಹಾಗೂ ಆರೋಪಿಗಳಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಎಸ್ಪಿ ಕಾರ್ತಿಕ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಗುಡಿಬಂಡೆ ಪೊಲೀಸ್ ಠಾಣೆಯ ಪಿಎಸ್ಐ ಪಾಪಣ್ಣ ಹಾಗೂ ಪೇದೆಗಳಾದ ಸುನಿಲ್ ಹಾಗೂ ಮುನಿರಾಜು ಅಮಾನತದವರು. ಅಕ್ರಮ ಕಾರ್ಯಾಚರಣೆ ಹಿನ್ನಲೆಯಲ್ಲಿ ಜಪ್ತಿ ಮಾಡಿದ್ದ ವಿನಾಯಕ ಸ್ಟೋನ್ ಕ್ರಷರ್ ಗೆ ಸೂಕ್ತ ಭದ್ರತೆ ನೀಡದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಅಲ್ಲಿನ ಎಂ ಸ್ಯಾಂಡ್ನ ಕ್ರಷರ್ ಮಾಲೀಕ ಭೈರೇಗೌಡ ಅಕ್ರಮವಾಗಿ ಸಾಗಾಟ ಮಾಡಿದ್ದರು. ನಂತರ ಎಸ್ಪಿ ಸೂಚನೆ ಮೇರೆಗೆ ಭೈರೇಗೌಡ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಆದೇಶ ಮಾಡಲಾಗಿತ್ತು.
ಆದರೆ ನ್ಯಾಯಾಂಗ ಬಂಧನ ಆದೇಶದ ತರುವಾಯ ಆರೋಪಿಯನ್ನ ಜೈಲಿನ ಅಧಿಕಾರಿಗಳ ಸುಪರ್ದಿಗೆ ನೀಡುವ ಬದಲು ಗುಡಿಬಂಡೆ ಪಿಎಸ್ಐ ಪಾಪಣ್ಣ ಹಾಗೂ ಪೇದೆಗಳು ಆತನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ರಿಂದ ವರದಿ ಪಡೆದ ಎಸ್ಪಿ ಕಾರ್ತಿಕ್ ರೆಡ್ಡಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.