– ಆಸ್ಪತ್ರೆ ಎದುರು ಶವಗಳನ್ನಿಟ್ಟು ಪ್ರತಿಭಟನೆ
– ಶವ ನೀಡಲು ಹಣ ಕೇಳಿದ ಸಿಬ್ಬಂದಿ!
ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮಹಿಳೆ ಹಾಗೂ ಮಗುವೊಂದು ಮೃತಪಟ್ಟಿದೆ.
ಸಂಡೂರು ತಾಲೂಕಿನ ಕೆರೆ ರಾಂಪುರ ಗ್ರಾಮದ ಸುಜಾತಾರನ್ನು ಭಾನುವಾರ ಸಂಜೆ ಹೆರಿಗೆಗಾಗಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದ್ರೆ ವಿಮ್ಸ್ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಮಗುವಿನ ಜೊತೆ ಸುಜಾತಾ ಮೃತಪಟ್ಟಿದ್ದಾರೆ. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷ ಖಂಡಿಸಿ ಸುಜಾತಾ ಸಂಬಂಧಿಕರು ವಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಜೆ ಹೆರಿಗೆಗಾಗಿ ಸುಜಾತಾ ಆಗಮಿಸಿದ ವೇಳೆಯಲ್ಲಿ ಹೆರಿಗೆ ನಂತರ ಮಗು ಮತ್ತು ಬಾಣಂತಿ ಆರೋಗ್ಯವಾಗಿದ್ದಾರೆಂದು ಹೇಳಿದ ವೈದ್ಯರು ನಂತರ ಏಕಾಎಕಿ ಮಗು ಮತ್ತು ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಶವ ನೀಡಲು ಹಣ ಕೊಡಿ ಅಂತಾ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ ವಿಮ್ಸ್ ವೈದ್ಯರ ನಿರ್ಲಕ್ಷಕ್ಕೆ ಸುಜಾತಾ ಬಲಿಯಾಗಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಇಂದು ಬೆಳಗ್ಗೆಯಿಂದ ವಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಕೃಷ್ಣಮೂರ್ತಿ ಪ್ರತಿಭಟನಾಕಾರರ ಮನವೊಲಿಸಲು ಹಾರಿಕೆ ಉತ್ತರ ನೀಡಿದ ಪರಿಣಾಮ ಪ್ರತಿಭಟನಾಕಾರರು ಆಕ್ರೋಶ ಮತ್ತಷ್ಟೂ ಹೆಚ್ಚಾಗಿದೆ. ಹೀಗಾಗಿ ಪ್ರತಿಭಟನೆಗೆ ಬೆಚ್ಚಿದ ವಿಮ್ಸ್ ನಿರ್ದೇಶಕರು ಪ್ರತಿಭಟನಾ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದರು. ಆದ್ರೆ ಪ್ರತಿಭಟನಾಕಾರರು ಪಟ್ಟು ಬಿಡದೆ ವಿಮ್ಸ್ ನಿದೇರ್ಶಕರಿಗೆ ದಿಗ್ಬಂಧನ ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.
ಹೀಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ನಾಲ್ಕು ಸಿಬ್ಬಂದಿಯನ್ನು ಅಮಾನತು ಮಾಡಿ ನಿರ್ದೇಶಕ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಆದ್ರೆ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವವರೆಗೂ ಹೋರಾಟ ಕೈಬಿಡಲ್ಲ ಎಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.